ಕರ್ನಾಟಕ

ಕುಮಾರಸ್ವಾಮಿಯೇ ನನ್ನನ್ನು ಬಿಜೆಪಿ ಜೊತೆ ಕಳಿಸಿದ್ದು; ಜಿಟಿ ದೇವೇಗೌಡ

Pinterest LinkedIn Tumblr


ಮೈಸೂರು (ಸೆ. 15): ನನ್ನನ್ನು ಕುಮಾರಸ್ವಾಮಿಯವರೇ ಬಿಜೆಪಿ ಜೊತೆಗೆ ಕಳುಹಿಸಿದ್ದಾರೆ. ದಸರಾ ಮಾಡಲು ಅವರೇ ಕಳುಹಿಸಿದ್ದಾರೆ. ಲೋಕಸಭಾ ಚುನಾವಣೆಗೂ ಅವರೇ ಕಳುಹಿಸಿದ್ದು ಎನ್ನುವ ಮೂಲಕ ಮಾಜಿ ಸಚಿವ ಜಿ.ಟಿ. ದೇವೇಗೌಡ ಹೊಸ ಬಾಂಬ್ ಸಿಡಿಸಿದ್ದಾರೆ.

ಮೈತ್ರಿ ಸರ್ಕಾರದ ಪತನದ ನಂತರ ಜೆಡಿಎಸ್​ನಲ್ಲಿ ಭಿನ್ನಮತ ಹೆಚ್ಚಾಗಿದ್ದು, ಜಿ.ಟಿ. ದೇವೇಗೌಡ ಈಗಾಗಲೇ ಒಂದು ಕಾಲನ್ನು ಬಿಜೆಪಿಯಲ್ಲಿ ಇಟ್ಟಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ, ಈ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಜಿಟಿಡಿ ಒಪ್ಪಿಕೊಂಡಿಲ್ಲ. ತಾನು ಬಿಜೆಪಿ ನಾಯಕರ ಜೊತೆಗೆ ಇರುವುದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿಯವರೇ ಕಾರಣ ಎಂದು ಇಂದು ಮೈಸೂರಿನಲ್ಲಿ ಹೇಳುವ ಮೂಲಕ ಅವರು ಅಚ್ಚರಿಗೆ ಕಾರಣರಾಗಿದ್ದಾರೆ.

‘ನನ್ನನ್ನು ಬಿಜೆಪಿ ಜೊತೆಗೆ ಕಳುಹಿಸಿದವರೇ ಹೆಚ್​.ಡಿ. ಕುಮಾರಸ್ವಾಮಿ. ಅವರು ನೀಡಿದ ಕೆಲಸವನ್ನು ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ, ಈಗಲೂ ನಿಭಾಯಿಸುತ್ತೇನೆ ಎಂದು ಹೇಳಿದ್ದಾರೆ. ಇದೇ ವೇಳೆ, ನನ್ನ ಮಗ ಜಿ.ಡಿ. ಹರೀಶ್ ಮೇಲೆ ಸಾ.ರಾ. ಮಹೇಶ್​ಗೆ ಪ್ರೀತಿ ಇದ್ದರೆ ಅವರೇ ನೇರವಾಗಿ ಬಂದು ಮಾತನಾಡಲಿ. ಹರೀಶ್ ಮೇಲೆ ಸಾ.ರಾ ಮಹೇಶ್​ಗೆ ಎಷ್ಟು ಪ್ರೀತಿ ಇದೆ ಅನ್ನೋದು ದೇವರಿಗೆ ಗೊತ್ತಿದೆ. ಅದು ನನಗೂ ಗೊತ್ತಿದೆ. ಈ ವಿಷಯ ಹರೀಶ್​ ಮತ್ತು ಖುದ್ದು ಸಾ.ರಾ. ಮಹೇಶ್ ಅವರಿಗೂ ಗೊತ್ತಿದೆ’ ಎಂದು ಹೇಳಿದ್ದಾರೆ.

ಸಾ.ರಾ. ಮಹೇಶ್ ಒಳ್ಳೆಯ ನಾಯಕ. ಕುಮಾರಸ್ವಾಮಿಯವರನ್ನು ಬಿಟ್ಟರೆ ರಾಜ್ಯದಲ್ಲಿರುವ ಒಳ್ಳೆಯ ನಾಯಕ ಎಂದರೆ ಅವರೊಬ್ಬರೇ. ಅವರಿಗೆ ಭವಿಷ್ಯವಿದೆ. ನಾನು ಅವರಿಗೆ ಅಡ್ಡಗಾಲು ಹಾಕುವುದಿಲ್ಲ. ಅವರು ಯುವಕರಿದ್ದಾರೆ, ಚೆನ್ನಾಗಿ ಬೆಳೆಯಲಿ ಎಂದು ಮಾಜಿ ಸಚಿವ ಜಿ.ಟಿ. ದೇವೇಗೌಡ ವ್ಯಂಗ್ಯವಾಡಿದ್ದಾರೆ.

Comments are closed.