ಕರ್ನಾಟಕ

ಹಿಂದಿ ಹೇರಿಕೆ ವಿರುದ್ಧ ಭುಗಿಲೆದ್ದ ಆಕ್ರೋಶ ; ಟ್ಟಿಟ್ಟರ್‌ನಲ್ಲಿ ಕಿಡಿಕಾರಿದ ಎಚ್‌ಡಿಕೆ, ಸಿದ್ದರಾಮಯ್ಯ

Pinterest LinkedIn Tumblr

ಬೆಂಗಳೂರು: ಸೆಪ್ಟೆಂಬರ್‌ 14ನ್ನು ದೇಶದಲ್ಲಿ ಹಿಂದಿ ದಿವಸವಾಗಿ ಆಚರಿಸಲಾಗುತ್ತದೆ. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದಿ ಹೇರಿಕೆಯ ಯತ್ನಗಳು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಹಿಂದಿ ದಿವಸ ಆಚರಣೆಗೆ ತೀವ್ರ ವಿರೋಧ ಕೇಳಿ ಬಂದಿದೆ.

ಪ್ರಮುಖವಾಗಿ ಸಾಮಾಜಿಕ ಜಾಲತಾಣ ಟ್ಟಿಟ್ಟರ್‌ನಲ್ಲಿ ಹಿಂದಿ ಹೇರಿಕೆ ವಿರುದ್ಧ ಅಭಿಯಾನವೇ ನಡೆಯುತ್ತಿದ್ದು, ಹಲವರು ಹಿಂದಿ ಹೇರಿಕೆ ನಿಲ್ಲಿಸಿ ಎಂಬುದಾಗಿ ಟ್ಟೀಟ್‌ ಮಾಡಿದ್ದಾರೆ. ಪರಿಣಾಮ ಅದೀಗ ನಂಬರ್‌ 1 ಟ್ರೆಂಡ್‌ನಲ್ಲಿದೆ.

ಇದಕ್ಕೆ ಇನ್ನೂ ಒಂದು ಕಾರಣವಿದೆ. ಶನಿವಾರ ಟ್ಟೀಟ್‌ ಮಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಗೃಹ ಸಚಿವ ಅಮಿತ್‌ ಶಾ ‘ಹಿಂದಿ ಮಾತ್ರವೇ ದೇಶವನ್ನು ಒಂದುಗೂಡಿಸಬಲ್ಲುದು’ ಎಂದಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.

“ನಿಮ್ಮ ಮಾತೃ ಭಾಷೆಯ ಜೊತೆ ಹಿಂದಿಯ ಬಳಕೆಯನ್ನೂ ಹೆಚ್ಚಿಸಿ ಮಹತ್ಮಾ ಗಾಂಧಿ ಮತ್ತು ಸರ್ದಾರ್‌ ಪಟೇಲರ ‘ಒಂದು ದೇಶ ಒಂದು ಭಾಷೆ’ ಕನಸನ್ನು ನನಸು ಮಾಡಲು ಸಹಕರಿಸಿ’ ಎಂಬುದಾಗಿ ಅವರು ಹೇಳಿದ್ದರು.

ಇದಕ್ಕೆ ಕಡು ಟೀಕೆ ವ್ಯಕ್ತವಾಗಿದ್ದು, “ಹಿಂದಿ ಎಲ್ಲರ ಮಾತೃ ಭಾಷೆಯಲ್ಲ. ಈ ದೇಶದ ನೆಲವನ್ನು ಸಂಧಿಸುವ ಸುಂದರ ಮತೃಭಾಷೆಗಳ ವೈವಿಧ್ಯವನ್ನು ನೀವು ಹೊಗಳಲು ಪ್ರಯತ್ನಿಸುವಿರಾ?” ಎಂಬುದಾಗಿ ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್‌ ಓವೈಸಿ ಪ್ರಶ್ನಿಸಿದ್ದಾರೆ.

ಇನ್ನು ಈ ಬಗ್ಗೆ ಖಾರವಾದ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, “ಭಾಷೆಗಳು ಜ್ಞಾನದ ಕಿಂಡಿಗಳು, ಅದನ್ನು ಪ್ರೀತಿಯಿಂದ ಬೆಳೆಸಬೇಕೇ ಹೊರತು ಒತ್ತಡ-ಒತ್ತಾಯದ ಮೂಲಕ ಅಲ್ಲ. ನಮ್ಮ ವಿರೋಧ ಹಿಂದಿ ಎಂಬ ಭಾಷೆ ಬಗ್ಗೆ ಅಲ್ಲ, ಅದರ ಬಲವಂತದ ಹೇರಿಕೆ ಬಗ್ಗೆ. ಹಿಂದಿ ದಿವಸದ ಆಚರಣೆಗೆ ನನ್ನ ವಿರೋಧವೂ ಇದೆ,” ಎಂದಿದ್ದಾರೆ.

ಜೊತೆಗೆ, “ಹಿಂದಿ ರಾಷ್ಟ್ರಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ. ಅದು ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ,” ಎಂಬುದಾಗಿ ಚಾಟಿ ಬೀಸಿದ್ದಾರೆ.

ಇನ್ನು ಕನ್ನಡ ಭಾಷಾ ದಿನದ ಆಚರಣೆ ಯಾವಾಗ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಇನ್ನೋರ್ವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಇದಕ್ಕೆ ಪೂರಕವಾಗಿ ಬೆಂಗಳೂರಿನಲ್ಲಿ ಕನ್ನಡ ರಣಧೀರ ಪಡೆ ಸೇರಿದಂತೆ ಕನ್ನಡ ಪರ ಸಂಘಟನೆಗಳು ಪುರಭವನ ಮುಂಭಾಗ ಪ್ರತಿಭಟನೆ ಕೂಡ ನಡೆಸಿವೆ.

ಕಪ್ಪು ಬಟ್ಟೆ ಧರಿಸಿ ಕರಾಳ ದಿನ ಹಕ್ಕೊತ್ತಾಯ ಮೆರವಣಿಗೆ ನಡೆಸಿರುವ ಸಂಘಟನೆ ಸದಸ್ಯರು ಸೆಪ್ಟೆಂಬರ್‌ 14ರ ಹಿಂದಿ ದಿವಸ್‌ ಆಚರಣೆ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

Comments are closed.