
ಮಂಡ್ಯ: ಮಂಡ್ಯದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಸುರೇಶ್ ಗೌಡ, ನನಗೂ ಬಿಜೆಪಿ ಹೋಗಬೇಕು ಅನ್ನಿಸಿತ್ತು. ಸರ್ಕಾರ ಬಿದ್ದು ಹೋದ ಮೇಲೆ ನಾವ್ಯಾಕೆ ಹೋಗ್ಲಿಲ್ಲ. ನಾವು ಹೋಗಿದ್ರೆ ಚೆನ್ನಾಗಿರ್ತಿತ್ತು ಅಂತ ಅನ್ಸಿತ್ತು. ಅನರ್ಹ ಶಾಸಕರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡ್ರೆ ನಾವು ತೆಗೆದುಕೊಂಡ ನಿರ್ಧಾರವೇ ಸರಿ ಅನ್ಸುತ್ತೆ. ಅನರ್ಹ ಮಾಡಿದ ಒಂದು ಗಂಟೆಯಲ್ಲೇ ಸುಪ್ರೀಂಕೋರ್ಟ್ನಿಂದ ತಡೆ ಕೊಡಿಸ್ತಾರೆ ಅಂತ ಹೇಳಿದ್ರು. ಆದ್ರೆ 24 ದಿನವಾದ್ರೂ ತಡೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ನಿಮ್ಮನ್ನ ಬಿಜೆಪಿ ಸೇರುವಂತೆ ಕರೆದಿದ್ರಾ ಎಂಬ ಪ್ರಶ್ನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸುರೇಶ್ ಗೌಡ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರನ್ನೂ ಬಿಜೆಪಿಗೆ ಕರೆದಿದ್ರು. ಇನ್ನು ನನ್ನನ್ನ ಬಿಟ್ಟಿರ್ತಾರಾ? ಎಂದು ಹೇಳುವ ಮೂಲಕ ತಮ್ಮನ್ನು ಕೂಡ ಬಿಜೆಪಿ ಕರೆದಿದ್ದರು ಎಂದು ಪರೋಕ್ಷವಾಗಿ ಹೇಳಿದ್ದಾರೆ. ಅಲ್ಲದೇ, ಪರಿಸ್ಥಿತಿ ನೋಡಿದ್ರೆ ಮಧ್ಯಂತರ ಚುನಾವಣೆಗೆ ಸಿದ್ಧವಾಗೋದು ಒಳ್ಳೆಯದು. ಈಗಾಗಲೇ ನಮ್ಮ ವರಿಷ್ಠರು ಮಧ್ಯಂತರ ಚುನಾವಣೆಗೆ ತಯಾರುಗುವಂತೆ ಹೇಳಿದ್ದಾರೆ ಎಂದರು.
ತಾನು, ತನ್ನ ಮೊಮ್ಮಗನ ಸೋಲಿಗೆ ಸಿದ್ದರಾಮಯ್ಯ ಕಾರಣ ಎಂದು ದೇವೇಗೌಡ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸುರೇಶ್ ಗೌಡ, ಅಂಗೈಯಲ್ಲಿರುವ ಹುಣ್ಣಿಗೆ ಕನ್ನಡಿ ಯಾಕೆ ಬೇಕು. ಅದು ಸತ್ಯ. ಕಾಂಗ್ರೆಸ್ ಜೊತೆ ಹೋಗೋದು ತಪ್ಪು ಅಂತ ಮೊದಲೇ ವರಿಷ್ಠರಿಗೆ ಹೇಳಿದ್ದೆ. ಈ ಭಾಗದಲ್ಲಿ ನಮಗೆ ಪ್ರಬಲವಾಗಿ ಪೈಪೋಟಿ ಕೊಡೋದೇ ಕಾಂಗ್ರೆಸ್ನವರು. ಹಾಗಾಗಿ ಮೈತ್ರಿ ಬೇಡ ಅಂತ ಹೇಳಿದ್ದೆ. ಜಾತ್ಯತೀತ ತತ್ವದ ಮೇಲೆ ವರಿಷ್ಠರು ತೀರ್ಮಾನ ತೆಗೆದುಕೊಂಡಿದ್ರು. ಈಗ ನಾವು ಹೇಳಿದ್ದೆ ಸರಿ ಅಂತ ಅನ್ನಿಸಿರಬಹುದು ಎಂದು ಹೇಳಿದರು.
ಹಳೇ ಮೈಸೂರು ಭಾಗದಲ್ಲೂ ಬಿಜೆಪಿ ಪ್ರಬಲಗೊಳಿಸುವ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸುರೇಶ್ ಗೌಡ, ಹೊಸದರಲ್ಲಿ ಆರಂಭ ಶೂರತ್ವ. ಅವರಿಗೆ ಹಳೇ ಮೈಸೂರು ಭಾಗದ ಬಗ್ಗೆ ಏನು ಗೊತ್ತು..? ಈ ಭಾಗದ ಬಿಜೆಪಿ ನಾಯಕರಿಗೆ ಗೊತ್ತು. ಇಲ್ಲೆಲ್ಲ ಜೆಡಿಎಸ್ಗೆ ಕಾಂಗ್ರೆಸ್ ಶತ್ರು, ಕಾಂಗ್ರೆಸ್ಗೆ ಜೆಡಿಎಸ್ ಶತ್ರು ಎಂದು ಹೇಳಿದ್ದಾರೆ.
Comments are closed.