ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ರಚನೆಯಾಗಿದೆ. ನೂತನ ಸರ್ಕಾರದಲ್ಲಿ ಮಂತ್ರಿ ಪದವಿಗಾಗಿ ಹಲವು ಶಾಸಕರು ತುದಿಗಾಲಲ್ಲಿ ನಿಂತಿದ್ದರೆ, ಇನ್ನು ಹಲವರು ಮಂತ್ರಿ ಆಗಲೇಬೇಕು ಎಂದು ಹಠ ಹಿಡಿದಿದ್ದಾರೆ. ಆ ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕೂಡ ಒಬ್ಬರು.
ಮಂತ್ರಿ ಆಗುವ ಹಠಕ್ಕೆ ಬಿದ್ದಿರುವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಚಿವ ಸ್ಥಾನಕ್ಕಾಗಿ ಬಿಎಸ್ವೈಗೆ ಒತ್ತಡ ಹಾಕುತ್ತಿದ್ದಾರೆ. ಮುಖ್ಯಮಂತ್ರಿ ಆಗಿದ್ದವರು ಮಂತ್ರಿ ಆದರೆ, ಹಿಂಬಡ್ತಿ ಆದಂತೆ. ಆದರೂ ಶೆಟ್ಟರ್ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮಂತ್ರಿ ಸ್ಥಾನ ಬೇಕೇಬೇಕು ಎಂದು ಹಠ ಹಿಡಿದಿದ್ದಾರೆ.
ಜಗದೀಶ್ ಶೆಟ್ಟರ್ ಈ ಹಿಂದೆ ಮುಖ್ಯಮಂತ್ರಿಯಾಗಿದ್ದವರು. ಇವರಿಗೆ ಈಗ ಮಂತ್ರಿ ಸ್ಥಾನ ನೀಡುವುದು ಸೂಕ್ತವಲ್ಲ. ಹೀಗಾಗಿ ಅವರನ್ನು ವಿಧಾನಸಭೆ ಸ್ಪೀಕರ್ ಮಾಡುವುದು ಉತ್ತಮ ಎಂಬ ಲೆಕ್ಕಾಚಾರವನ್ನು ಬಿಜೆಪಿ ಮುಖಂಡರು ನಡೆಸಿದ್ದರು. ಆದರೆ, ಸ್ಪೀಕರ್ ಆಗಲು ಶೆಟ್ಟರ್ ಸುತಾರಾಂ ಒಪ್ಪಲಿಲ್ಲ. ಆನಂತರ ಆ ಸ್ಥಾನಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಕೂರಿಸಲಾಯಿತು. ಆದರೆ, ತನಗೆ ಮಂತ್ರಿ ಸ್ಥಾನ ಬೇಕು ಎಂದು ಜಗದೀಶ್ ಶೆಟ್ಟರ್ ನೆನ್ನೆ ರಾತ್ರಿ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ವೈ ನಿವಾಸದಲ್ಲಿ ಹಠ ಹಿಡಿದು ಕುಳಿತಿದ್ದರು.
ಇದರ ಜೊತೆಗೆ ತಮಗೆ ಇಂತಹದ್ದೇ ಖಾತೆಯನ್ನು ಕೊಡಿ ಎಂದು ಶೆಟ್ಟರ್ ಡಿಮ್ಯಾಂಡ್ ಕೂಡ ಮಾಡಿದ್ದಾರೆ. ತಾನು ಸಿಎಂ ಆಗಿದ್ದವರು ಹೀಗಾಗಿ ಡಿಸಿಎಂ ಮಾಡಿ, ಇಲ್ಲವಾದಲ್ಲಿ ಗೃಹ, ಕಂದಾಯ ಅಥವಾ ಗ್ರಾಮೀಣಾಭಿವೃದ್ಧಿ ಖಾತೆ ಕೊಡಿ ಎಂದು ಬೇಡಿಕೆ ಇಟ್ಟಿದ್ದಾರಂತೆ.
ಶೆಟ್ಟರ್ ಬೇಡಿಕೆ ಕೇಳಿ ಕಂಗಾಲಾಗಿದ್ದಾರೆ ಬಿಎಸ್ವೈ, ಡಿಸಿಎಂ ಸ್ಥಾನ ನೀಡಲಾಗದಿದ್ದರೂ ಮಂತ್ರಿ ಮಾಡುವ ತೀರ್ಮಾನಕ್ಕೆ ಬಂದಿದ್ದಾರಂತೆ. ಹೀಗಾಗಿ ಅಮಿತ್ ಶಾಗೆ ಕಳಿಸುವ ಸಚಿವರ ಹೆಸರಿನ ಪಟ್ಟಿಯಲ್ಲಿ ಜಗದೀಶ್ ಶೆಟ್ಟರ್ ಹೆಸರು ಸೇರಿಸಿ ಕಳಿಯಿಸುವ ಭರವಸೆ ನೀಡಿದ್ದಾರಂತೆ. ಮಾಜಿ ಸಿಎಂ ಎಂಬ ಅತಿದೊಡ್ಡ ಗೌರವ ಹೋದರು ಪರವಾಗಿಲ್ಲ, ಮಂತ್ರಿ ಮಾಡಿ ಎಂದು ಜಗದೀಶ್ ಶೆಟ್ಟರ್ ಹಠ ಹಿಡಿಯಲು ಅವರ ಹೋಮ್ ಮಿನಿಸ್ಟರ್ (ಹೆಂಡತಿ) ಕಾರಣವಂತೆ ಎಂಬ ಚರ್ಚೆ ಬಿಜೆಪಿಯಲ್ಲಿ ಜೋರಾಗಿ ನಡೆಯುತ್ತಿದೆ.
Comments are closed.