ಕರ್ನಾಟಕ

ಪತಿ ಮಾಂಸ ತರಲಿಲ್ಲ ಎಂದು ಮಕ್ಕಳಿಬ್ಬರನ್ನು ಟಬ್​ನಲ್ಲಿ ಮುಳುಗಿಸಿ, ಪತ್ನಿ ಆತ್ಮಹತ್ಯೆ!

Pinterest LinkedIn Tumblr


ಬಳ್ಳಾರಿ (ಆ.1): ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಎಂದು ಹೇಳುತ್ತಾರೆ. ಆದರೆ, ಇಲ್ಲಿ ಮಾಂಸಾದೂಟದ ವಿಚಾರವಾಗಿ ಗಂಡ-ಹೆಂಡತಿ ನಡುವೆ ಶುರುವಾದ ಜಗಳ ಸಾವಿನಲ್ಲಿ ಅಂತ್ಯವಾಗಿದೆ.

ಗಂಡ ಅಡುಗೆಗೆ ಮಾಂಸ ತರಲಿಲ್ಲ ಎಂದು ಕೋಪಗೊಂಡ ಹೆಂಡತಿ ತನ್ನ ಇಬ್ಬರು ಮಕ್ಕಳನ್ನು ನೀರಿನ ಟಬ್​ನಲ್ಲಿ ಮುಳುಗಿಸಿ, ಕೊನೆಗೂ ಆಕೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಬಳ್ಳಾರಿಯ ಕೆಎಂಎಫ್ ಕಚೇರಿ ಹಿಂಭಾಗ ಎಂಕೆ ನಗರದ ಕಟ್ಟಡ ಕಾರ್ಮಿಕ ವೀರೇಶ್​ ಅವರ ಹೆಂಡತಿ ಲಕ್ಷ್ಮೀ ಎಂಬುವವರೆ ತನ್ನ ಮಕ್ಕಳಾದ ಮೂರು ವರುಷದ ಉದಯ್ ಹಾಗೂ ಒಂದೂವರೆ ವರುಷ ಭೂಮಿಕಾಳನ್ನು ನೀರಿನಲ್ಲಿ ಮುಳುಗಿಸಿ, ಕೊನೆಗೂ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿರುವ ವೀರೇಶ್​ಗೆ ನೆನ್ನೆ ರಾತ್ರಿ ಹೆಂಡತಿ ಮಾಂಸ ತರುವಂತೆ ಹೇಳಿದ್ದಾಳೆ. ಆದರೆ, ಮಾಂಸ ತರದ ಕಾರಣಕ್ಕೆ ಕೋಪಗೊಂಡ ಹೆಂಡತಿ ಮೊಟ್ಟೆ ಸಾಂಬಾರ್​ ಮಾಡಿದ್ದಾಳೆ. ಆದರೆ, ತಾನು ಊಟ ಮಾಡದೆ, ಬೇಸರದಲ್ಲಿಯೇ ಮಲಗಿದ್ದಾಳೆ. ಬೆಳಗ್ಗೆಗೆ ಸರಿಹೋಗುತ್ತದೆ ಎಂದುಕೊಂಡ ವೀರೇಶ್ ಮರುದಿನ ಕೆಲಸಕ್ಕೆ ಹೋಗಿದ್ದಾರೆ. ಸಂಜೆ ಮನೆಗೆ ಬಂದಾಗ ಪತ್ನಿ ಲಕ್ಷ್ಮಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇಬ್ಬರು ಮುದ್ದಾದ ಮಕ್ಕಳಾದ ಉದಯ್ ಹಾಗೂ ಭೂಮಿಕಾ ನೀರಿನ ಟಬ್​ನಲ್ಲಿ ಮುಳುಗಿ ಸತ್ತಿದ್ದರು. ಈ ಹೃದಯವಿದ್ರಾವಕ ದೃಶ್ಯಗಳನ್ನು ನೋಡುತ್ತಿದ್ದಂತೆ ವೀರೇಶ್​ ಸ್ವಾಧೀನ ಕಳೆದುಕೊಂಡು ಪ್ರಜ್ಞೆ ಕಳೆದುಕೊಂಡಿದ್ದಾರೆ. ಆನಂತರ ಎದ್ದ ವೀರೇಶ್​ ಆಕ್ರಂದನ ಕೇಳಿ ಅಕ್ಕಪಕ್ಕದ ಮನೆಯವರೆಲ್ಲ ಬಂದು ನೋಡಿದಾಗ ವಿಷಯ ಗೊತ್ತಾಗಿದೆ. ಪುಟ್ಟದಾದ ಮನೆಯಲ್ಲಿ ಗಂಡಹೆಂಡತಿ ಇಬ್ಬರು ಮಕ್ಕಳೊಂದಿಗೆ ಅತ್ತೆ, ಮಾವ ವಾಸವಿರುತ್ತಿದ್ದರು.

ಬಳ್ಳಾರಿಯ ಕೌಲ್ ಬಜಾರ್ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಜಿಲ್ಲಾ ಎಸ್ಪಿ ಸಿ ಕೆ ಬಾಬಾ ಭೇಟಿ ನೀಡಿ ಘಟನೆಯ ಮಾಹಿತಿ ಪಡೆದರು.

ಬುಧವಾರವಷ್ಟೇ ಬಳ್ಳಾರಿಯ ಕಂಪ್ಲಿಯ ನೆಲ್ಲೋಡಿ ಗ್ರಾಮದಲ್ಲಿ ತಾಯಿಯೊಬ್ಬರು ಗಂಡನ ಮನೆಯವರ ಕಿರುಕುಳ ತಾಳಲಾರದೆ ತನ್ನಿಬ್ಬರು ಮಕ್ಕಳಿಗೆ ವಿಷ ಉಣಿಸಿ ತಾನು ಕ್ರಿಮಿನಾಷಕ ಸೇವಿಸಿ ಸಾವನ್ನಪ್ಪಿದ್ದರು. ಇದರಲ್ಲಿ ಅದೃಷ್ಟವಶಾತ್ ಒಂದು ಮಗು ಪ್ರಾಣಾಪಾಯದಿಂದ ಪಾರಾಗಿದೆ.

Comments are closed.