ಬೆಂಗಳೂರು(ಜುಲೈ 22) : ನಿಮ್ಮನ್ನ ಬಿಜೆಪಿ ನಾಯಕರು ನಡುರಸ್ತೆಯಲ್ಲಿ ಬಿಡುತ್ತಾರೆ. ಸ್ಪೀಕರ್ ರೂಲಿಂಗ್ ಅನ್ನು ಅರ್ಥ ಮಾಡಿಕೊಳ್ಳಿ. ನಿಮ್ಮ ಭವಿಷ್ಯವನ್ನು ನೀವೇ ಹಾಳು ಮಾಡಿಕೊಳ್ಳಬೇಡಿ. ನೀವು ವಾಪಸ್ ಬಂದು, ರಾಜೀನಾಮೆ ಹಿಂಪಡೆಯುವುದು ಒಳ್ಳೆಯದು ಎಂದು ಅತೃಪ್ತ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿವಿಮಾತು ಹೇಳಿದ್ದಾರೆ.
ವಿಪ್ ವಿಚಾರವಾಗಿ ಎಲ್ಲ ಶಾಸಕರಿಗೆ ಸ್ಪಷ್ಟತೆ ಸಿಗಬೇಕು. ನಾವು ಖಂಡಿತ ಒಪ್ಪಿಕೊಂಡಿದ್ದೆವು ಇಂದೇ ಮತಕ್ಕೆ ಹಾಕಬೇಕು ಅಂತ. ಆದರೆ ಇನ್ನೂ ಸಾಕಷ್ಟು ಚರ್ಚೆ ಬಾಕಿ ಇದೆ. ನಾಳೆಯೂ ಸುಪ್ರಿಂಕೋರ್ಟ್ನಿಂದ ತೀರ್ಪು ಬರಹುದಿದೆ. ಹೀಗಾಗಿ ಈ ಸಂದರ್ಭದಲ್ಲಿ ಮತಕ್ಕೆ ಹಾಕುವುದು ಸರಿಯಲ್ಲ ಅಂತ ಅನಿಸುತ್ತದೆ. ಚರ್ಚೆಯನ್ನು ನಾವು ಮುಂದುವರೆಸಲೇಬೇಕಾಗುತ್ತದೆ. 224 ಕ್ಷೇತ್ರಗಳ ಶಾಸಕರಿಗೆ ಇದು ಮನವರಿಕೆಯಾಗಬೇಕು ಎಂದರು.
ಸಿಎಂ ನೀಡುವ ವಿಚಾರ ಚರ್ಚೆಯಾಗಿಲ್ಲ
ನಮ್ಮ ರೆಬೆಲ್ ಎಂಎಲ್ಎಗಳಿಗೆ ಸುಪ್ರೀಂ ಪೂರಕವಾಗಿ ಮಧ್ಯಂತರ ತೀರ್ಪು ನೀಡಿತ್ತು. ಇದರ ಮೇಲೆ ನಾವು ಕ್ರಿಯಾಲೋಪವನ್ನು ಎತ್ತಿದೆವು. ಶೆಡ್ಯೂಲ್ 10ರ ಪ್ರಕಾರ ವಿಪ್ ಜಾರಿ ಮಾಡುವ ಶಕ್ತಿಯನ್ನು ಕಸಿದುಕೊಂಡಿಲ್ಲ ಅನ್ನೋದನ್ನು ಸ್ಪೀಕರ್ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಒಳ್ಳೆಯ ರೂಲಿಂಗ್ ಅನ್ನು ಸ್ಪೀಕರ್ ನೀಡಿದ್ದಾರೆ. ಹೀಗಾಗಿ ನಾಳೆ ನಮ್ಮ ಪಿಟಿಷನ್ ವಿಚಾರಣೆಗೆ ಬರಲಿದೆ. ಇದು ಸರ್ಕಾರದ ಅಳಿವು- ಉಳಿವಿನ ಪ್ರಶ್ನಯಾಗಿದೆ ಎಂದು ದಿನೇಶ್ ಗುಂಡೂರಾವ್, ಕಾಂಗ್ರೆಸ್ ಗೆ ಸಿಎಂ ಸ್ಥಾನ ಹಂಚಿಕೆ ವಿಚಾರ ಸತ್ಯಕ್ಕೆ ದೂರವಾದ ಮಾತು. ಇದುವರೆಗೂ ಆ ರೀತಿ ಯಾವುದೇ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ವಿಶ್ವಾಸಮತಕ್ಕೆ ಕಾಲಾವಕಾಶ ಕೇಳಿದ ಸಿಎಂ
ಇಂದು ವಿಶ್ವಾಸಮತ ಸಾಬೀತು ಮಾಡಲು ಕಷ್ಟ. ಇನ್ನೂ ಮಾತನಾಡುವವರು ತುಂಬಾ ಜನ ಇದ್ದಾರೆ. ವಿಶ್ವಾಸಮತದ ಮೇಲೆ ಅಭಿಪ್ರಾಯ ತಿಳಿಸಬೇಕು. ಶಾಸಕರ ಹಕ್ಕು ಕಿತ್ತುಕೊಳ್ಳುವುದು ಸರಿಯಲ್ಲ. ದಯಮಾಡಿ ಇನ್ನೆರಡು ದಿನ ಸಮಯ ಕೊಡಿ ಎಂದು ಸ್ಪೀಕರ್ ಕೆ ಆರ್ ರಮೇಶ್ಕುಮಾರ್ ಬಳಿ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
Comments are closed.