
ಬೆಂಗಳೂರು(ಜುಲೈ.14): ಆರ್ಎಸ್ಎಸ್ ಕಟ್ಟಾಳು ಬಿ.ಎಲ್. ಸಂತೋಷ್ ಅವರಿಗೆ ಮಹತ್ವದ ಜವಾಬ್ದಾರಿ ನೀಡಲಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರ ಸೂಚನೆ ಮೇರೆಗೆ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕ್ಕಾರಕ್ಕೆ ಬರುವ ಮುನ್ನವೇ ಸಂತೋಷ್ ಅವರಿಗೆ ಉನ್ನತ ಹುದ್ದೆ ನೀಡಿರುವುದು ಭಾರೀ ಕುತೂಹಲ ಮೂಡಿಸಿದೆ.
ಈ ಹಿಂದೆಯೇ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಕರ್ನಾಟಕದ ಆರ್ಎಸ್ಎಸ್ ಕಟ್ಟಾಳು ಬಿ.ಎಲ್. ಸಂತೋಷ್ ಉನ್ನತ ಸ್ಥಾನಕ್ಕೆ ಏರಲಿದ್ದಾರೆ ಎನ್ನಲಾಗಿತ್ತು. ಅಂತೆಯೇ ಸಂತೋಷ್ ಆಪ್ತರಿಗೂ ರಾಜ್ಯ ಬಿಜೆಪಿಯಲ್ಲಿ ಹೆಚ್ಚಿನ ಜವಾಬ್ದಾರಿ ಹೆಗಲೇರಲಿದೆ ಎಂದೂ ಹೇಳಲಾಗುತ್ತಿತ್ತು.
ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ರಾಮ್ಲಾಲ್ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸ್ಥಾನದ ಮೇಲೆ ಬಿ.ಎಲ್. ಸಂತೋಷ್ ಕಣ್ಣಿಟ್ಟಿದ್ದು, ಮತ್ತೆ ಕೇಂದ್ರದಲ್ಲಿ ಅಧಿಕಾರ ಗದ್ದುಗೆಗೇರಿದರೆ ರಾಮ್ಲಾಲ್ ಸ್ಥಾನವನ್ನು ಸಂತೋಷ್ ಪಡೆಯಲಿದ್ದಾರೆ ಎಂದು ತಿಳಿದು ಬಂದಿತ್ತು.
ದಕ್ಷಿಣ ಭಾರತದಲ್ಲಿ ಬಿಜೆಪಿಯ ಬಲವರ್ಧನೆಯ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಕೂಡ ಸಂತೋಷ್ ಅವರಿಗೆ ಉನ್ನತ ಸ್ಥಾನ ನೀಡಲು ಚಿಂತಿಸಿದೆ ಎಂದೂ ರಾಜ್ಯ ಬಿಜೆಪಿ ನಾಯಕರು ಮಾಹಿತಿ ನೀಡಿದ್ದರು. ಅದರ ಜತೆಗೆ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದ ಅವಧಿ ಮುಗಿದು ಆರು ತಿಂಗಳುಗಳೇ ಕಳೆದಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ಪ್ರಬಲ ನಾಯಕರು ಈ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ ಎಂದು ಕೂಡ ಮೂಲಗಳು ತಿಳಿಸಿದ್ದವು.
ಹೈಕಮಾಂಡ್ ಮಟ್ಟದಲ್ಲಿ ಇತ್ತೀಚೆಗೆ ಬಿ.ಎಲ್. ಸಂತೋಷ್ ಪ್ರಭಾವಿಯಾಗಿ ಬೆಳೆದಿರುವುದು ಗುಟ್ಟಾಗಿ ಉಳಿದಿರಲಿಲ್ಲ. ರಾಜ್ಯದಲ್ಲೀಗ ಮೈತ್ರಿ ಸರ್ಕಾರ ಕುಸಿದು ಹೋಗುವ ಹಂತದಲ್ಲಿದ್ದು, ಬಿಜೆಪಿ ಅಧಿಕ್ಕಾರಕ್ಕೇರುವ ಸಾಧ್ಯತೆಗಳಿವೆ. ಇದೇ ಹೊತ್ತಲ್ಲಿ ಬಿ.ಎಲ್. ಸಂತೋಷ್ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿರುವುದು ಚರ್ಚಾ ಕೇಂದ್ರವಾಗಿದೆ.
Comments are closed.