ಕರ್ನಾಟಕ

ಪೆಥಾಯ್‌ ಎಫೆಕ್ಟ್‌: ರಾಜ್ಯದಲ್ಲಿ ಶೀತಗಾಳಿ, ಹೆಚ್ಚಾದ ಚಳಿ

Pinterest LinkedIn Tumblr


ಬೆಂಗಳೂರು: ಪೆಥಾಯ್‌ ಚಂಡಮಾರುತದ ಪರಿಣಾಮದಿಂದ ರಾಜ್ಯದ ಕನಿಷ್ಠ ತಾಪಮಾನ 10-8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ದಕ್ಷಿಣ ಒಳನಾಡಿಗಿಂತ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚು ಕುಸಿದಿದೆ.

ಬಂಗಾಳಕೊಲ್ಲಿ ಬಳಿ ಕಾಣಿಸಿಕೊಂಡ ಪೆಥಾಯ್‌ ಚಂಡಮಾರುತ ಈಗ ದುರ್ಬಲವಾಗಿದೆ. ಆದರೆ ಇದರ ಪರಿಣಾಮದಿಂದ ರಾಜ್ಯದಲ್ಲಿ ಚಳಿ ಏರಿದ್ದು, ಬಹುತೇಕ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ 8, 10, 11 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ದಾಖಲಾಗಿದೆ.

ರಾಜ್ಯದ ಒಳನಾಡಿನಲ್ಲಿ ಟ್ರಫ್‌ (ಮೋಡಗಳ ಸಾಲು) ಕೂಡ ಇರುವುದರಿಂದ ಚಳಿ ಅಧಿಕವಾಗಿದೆ. ಹವಾಮಾನ ಇಲಾಖೆಯ ವರದಿಯಂತೆ, ಮಡಿಕೇರಿಯಲ್ಲಿ 8.8 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದೆ. ಇದು ವಾಡಿಕೆಗಿಂತ 4.2 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ. ವಿಜಯಪುರದಲ್ಲಿ 9 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ತಾಪಮಾನ ದಾಖಲಾಗಿದ್ದು, ವಾಡಿಕೆಗಿಂತ 6.1 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಇದೆ.

ಆದರೆ ಈ ತಾಪಮಾನ ಇನ್ನೂ ಕೆಳಕ್ಕೆ ಇಳಿಯಲಾರದು ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ತಜ್ಞರು ತಿಳಿಸಿದ್ದಾರೆ. ”ಪೆಥಾಯ್‌ ಚಂಡಮಾರುತದಿಂದ ತಾಪಮಾನ ಕೆಳಕ್ಕಿಳಿದಿದೆ. ಇದು ಕೆಲವೇ ದಿನಗಳಲ್ಲಿ ಚಳಿಗಾಲದಲ್ಲಿ ವಾಡಿಕೆಯಂತೆ ಕಂಡುಬರುವ ತಾಪಮಾನ ದಾಖಲಾಗಲಿದೆ,” ಎಂದು ಕೇಂದ್ರದ ವಿಜ್ಞಾನಿ ಎಸ್‌ಎಸ್‌ಎಂ ಗವಾಸ್ಕರ್‌ ತಿಳಿಸಿದ್ದಾರೆ.

ರಾಜಧಾನಿಯಲ್ಲಿ ಇಳಿದ ತಾಪಮಾನ

ಉಸ್ತುವಾರಿ ಕೇಂದ್ರದ ಪ್ರಕಾರ, ಬೆಂಗಳೂರಿನಲ್ಲಿ ಡಿ.17 ರಂದು 11.7 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ನಗರದಲ್ಲಿ ಕೆಲ ದಿನಗಳವರೆಗೆ ಇದೇ ರೀತಿ ಚಳಿ ಇರಲಿದೆ ಎಂದು ಗವಾಸ್ಕರ್‌ ಮಾಹಿತಿ ನೀಡಿದ್ದಾರೆ.

ಕನಿಷ್ಠ ತಾಪಮಾನ (ಡಿಗ್ರಿ ಸೆಲ್ಸಿಯಸ್‌)
ಮಡಿಕೇರಿ-8.8
ವಿಜಯಪುರ-9
ಹಾಸನ-10.2
ಬೀದರ್‌-10.4
ಆಗುಂಬೆ-10.9
ಮೈಸೂರು-11
ದಾವಣಗೆರೆ-12.3

ಚಳಿಗಾಲದಲ್ಲಿ ಸಾಮಾನ್ಯವಾಗಿ ಮೆದುಳು ಜ್ವರ, ಮೂತ್ರಪಿಂಡ ಸೋಂಕು, ಶೀತದಂಥ ಕಾಯಿಲೆಗಳೂ ಕಾಣಿಸಿಕೊಳ್ಳುತ್ತವೆ, ಅಸ್ತಮಾ ಉಲ್ಬಣಿಸುತ್ತದೆ. ನಿರ್ಲಕ್ಷ್ಯ ಮಾಡಿದರೆ ಸೋಂಕು ಹೆಚ್ಚಾಗುತ್ತದೆ. ತಕ್ಷಣ ಸೂಕ್ತ ಚಿಕಿತ್ಸೆ ಪಡೆಯಬೇಕು.
-ಪ್ರೊ.ಸಿ.ಎಸ್‌.ವಿನೋದ್‌ ಕುಮಾರ್‌, ಎಸ್‌ಎಸ್‌ ಹೈಟೆಕ್‌ ಮೆಡಿಕಲ್‌ ಕಾಲೇಜು

Comments are closed.