ಹೈದ್ರಾಬಾದ್: ರಾಜ್ಯಸಭಾ ಸದಸ್ಯ ಅಹ್ಮದ್ ಪಟೇಲ್ ಅವರನ್ನು ಮತ್ತೆ ರಾಜ್ಯಸಭೆಗೆ ಆಯ್ಕೆ ಮಾಡುವಲ್ಲಿ ಮತ್ತು ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆ ಮಾಡುವಲ್ಲಿ ಬಹುಮುಖ್ಯ ಪಾತ್ರವಹಿಸಿ, ಬಿಜೆಪಿ ರಾಷ್ಟ್ರ ನಾಯಕರಿಗೆ ಸಾವಲು ಹಾಕಿ, ಬಹುಪಾಲು ಯಶಸ್ವಿಯಾದವರು ಡಿ.ಕೆ. ಶಿವಕುಮಾರ್. ಈ ಮೂಲಕ ಶಿವಕುಮಾರ್ ತಾವು ಎಷ್ಟು ಪ್ರಭಾವಿ ಎಂಬುದನ್ನು ರಾಷ್ಟ್ರ ಮಟ್ಟದಲ್ಲಿ ಸಾಬೀತು ಮಾಡಿದ್ದರು. ಇದೀಗ ತೆಲಂಗಾಣ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದೊಳಗೆ ಎದ್ದಿರುವ ಆಂತರಿಕ ಬಂಡಾಯ ಶಮನದ ಜಬಾವ್ದಾರಿ ಕೂಡ ಡಿ.ಕೆ.ಶಿವಕುಮಾರ್ ಹೆಗಲ ಮೇಲೆ ಬಿದ್ದಿದೆ.
ಇನ್ನೊಂದು ವಾರದಲ್ಲಿ ಚುನಾವಣೆ ಎದುರಿಸುತ್ತಿರುವ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲ್ಲಲ್ಲೇ ಬೇಕೆಂಬ ಹಠ ತೊಟ್ಟಿದೆ. ಈ ನಡುವೆ ಹಲವು ಕಾಂಗ್ರೆಸ್ ನಾಯಕರು ತಮಗೆ ಟಿಕೆಟ್ ಸಿಗಲಿಲ್ಲ ಎಂದು ರೆಬೆಲ್ ಆಗಿ ಸ್ವತಂತ್ರವಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಕಾಂಗ್ರೆಸ್ಗೆ ಈಗ ಅವರ ಕಾರ್ಯರ್ತರೇ ಬಿಸಿತುಪ್ಪವಾಗಿದ್ದು, ಈ ಪರಿಸ್ಥಿತಿ ನಿಭಾಯಿಸಲು ಕಾಂಗ್ರೆಸ್ ಹೈಕಮಾಂಡ್ಗೆ ಕಂಡ ಸಮರ್ಥ ವ್ಯಕ್ತಿ ಕರ್ನಾಟಕದ ಪ್ರಭಾವಿಶಾಲಿ ಸಚಿವ ಡಿ.ಕೆ.ಶಿವಕುಮಾರ್.
ಹೈಕಮಾಂಡ್ ಸೂಚನೆಯಂತೆ, ಕಳೆದ ಎರಡು ದಿನಗಳಿಂದ ತೆಲಂಗಾಣದಲ್ಲಿ ಬಿಡುವಿಲ್ಲದ ಓಡಾಟ ನಡೆಸಿರುವ ಡಿಕೆ ಶಿವಕುಮಾರ್, ಅಲ್ಲಿನ ಬಂಡಾಯ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಅಲ್ಲದೇ ತಮಗೆ ಈ ಗೆಲುವು ಎಷ್ಟು ಅನಿವಾರ್ಯ ಎಂಬುದನ್ನು ಮನದಟ್ಟು ಮಾಡಿಸಿ, ಅವರ ಮನವೊಲಿಕೆ ಮಾಡಿದ್ದಾರೆ. ಡಿಕೆಶಿ ಅವರ ಸಂಧಾನ ಮಾತುಕತೆ ಬಹುತೇಕ ಯಶಸ್ವಿಯಾಗಿದ್ದು, ಡಿಕೆಶಿ ಮಾತಿಗೆ ಬೆಲೆ ಕೊಟ್ಟ ಬಂಡಾಯ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಇಂದು ಹಿಂಪಡೆದಿದ್ದಾರೆ.
ಚುನಾವಣೆ ಮುಗಿಯುವವರೆಗೂ ಡಿ.ಕೆ. ಶಿವಕುಮಾರ್ ಸೇವೆಯನ್ನು ಸಮರ್ಥವಾಗಿ ಉಪಯೋಗಿಸಿಕೊಳ್ಳಲು ಕಾಂಗ್ರೆಸ್ ತೀರ್ಮಾನಿಸಿದೆ. ಅಲ್ಲದೇ, ತೆಲಂಗಾಣ-ಕರ್ನಾಟಕದ ಗಡಿ ಭಾಗದಲ್ಲಿ ಡಿಕೆ ಶಿವಕುಮಾರ್ ಭರ್ಜರಿ ಪ್ರಚಾರ ನಡೆಸಲಿದ್ದು, ಕರ್ನಾಟಕ ಕಾಂಗ್ರೆಸ್ ಚಾಣಕ್ಯನ ಹವಾ ಎಷ್ಟರ ಮಟ್ಟಿಗೆ ಪ್ರಭಾವ ಬೀರಲಿದೆ ಎಂಬುದು ಚುನಾವಣೆ ಫಲಿತಾಂಶದ ಬಳಿಕ ತಿಳಿಯಲಿದೆ.
ಚುನಾವಣೆ ಉಸ್ತುವಾರಿ, ಪ್ರಚಾರ ಕಾರ್ಯ, ಸಂಧಾನ ಸಭೆ ಡಿ.ಕೆ.ಶಿವಕುಮಾರ್ ಅವರಿಗೆ ಹೊಸದೇನಲ್ಲ. ಈ ಹಿಂದೆ ಹಲವು ಬಾರಿ ಇಂತಹ ಕಾರ್ಯಗಳನ್ನು ಯಶಸ್ವಿಯಾಗಿ ಅವರು ನಿಭಾಯಿಸಿದ್ದಾರೆ.
Comments are closed.