ಬೆಂಗಳೂರು: ಜನಾರ್ದನ ರೆಡ್ಡಿ ದೊಡ್ಡ ಮೊತ್ತದ ಹಣ ಡೀಲ್ ಮಾಡಿರುವ ಪ್ರಕರಣ ಗಂಟೆಗೊಂದು ತಿರುವು ಪಡೆದುಕೊಳ್ಳುತ್ತಿದೆ. ಸದ್ಯ ಸಿಸಿಬಿ ಪೊಲೀಸರು ರೆಡ್ಡಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಪ್ರಕರಣಕ್ಕೆ ಪ್ರಮುಖ ಟ್ವಿಸ್ಟ್ ಒಂದು ಸಿಕ್ಕಿದೆ. ಅದೇನೆಂದರೆ ಆ್ಯಂಬಿಡೆಂಟ್ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ) ತನಿಖೆ ನಡೆಸಿಯೇ ಇರಲಿಲ್ಲವಂತೆ! ಈ ವಿಚಾರ ಸದ್ಯ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.
ವಿದೇಶಿ ಕರೆನ್ಸಿ ಬದಲಾವಣೆಯ ವಹಿವಾಟು ನಡೆಸಲು ಫರೀದ್ ಅಕ್ರಮವಾಗಿ ದುಬೈನಲ್ಲಿ ಒಂದು ಸಂಸ್ಥೆ ಸ್ಥಾಪಿಸಿದ್ದ. ಈ ಸಂಬಂಧ ಜನವರಿಯಲ್ಲಿಯೇ ಕಚೇರಿ ಮೇಲೆ ದಾಳಿ ನಡೆಸಿದ ಜಾರಿ ನಿರ್ದೇಶನಾಲಯ ದಾಖಲೆ ಪರಿಶೀಲನೆ ನಡೆಸಿತ್ತು. ಈ ವೇಳೆ ದುಬೈ ಕಂಪನಿಯಲ್ಲಿ 4 ಕೋಟಿ ರೂ. ವ್ಯವಹಾರ ನಡೆಸಿದ್ದ ವಿಚಾರ ಬಹಿರಂಗಗೊಂಡಿತ್ತು. ವಿದೇಶಿ ವಿನಿಮಯ ವ್ಯವಹಾರ ಉಲ್ಲಂಘನೆ ಮಾಡಿದ್ದಕ್ಕೆ ಇ.ಡಿ. ಅಧಿಕಾರಿಗಳು ಫರೀದ್ಗೆ ನೊಟೀಸ್ ನೀಡಿದ್ದರು. ವಿಚಾರಣೆಗೆ ಹಾಜರಾಗಿದ್ದ ಫರೀದ್, ತಪ್ಪು ಒಪ್ಪಿಕೊಂಡು 2 ಕೋಟಿ ರೂ. ದಂಡ ಕಟ್ಟಿದ್ದ. ಈ ಮೂಲಕ ಇ.ಡಿ. ಪ್ರಕರಣ ಇತ್ಯರ್ಥ ಮಾಡಿತ್ತು.
ಇನ್ನು, ಫರೀದ್ ನಗರದಲ್ಲೂ ಅಕ್ರಮವಾಗಿ ಆ್ಯಂಬಿಡೆಂಟ್ ಹೆಸರಿನಲ್ಲಿ ಕಂಪನಿ ನಡೆಸುತ್ತಿರುವುದು ಪತ್ತೆಯಾಗಿತ್ತು. ಈ ಬೆನ್ನಲ್ಲೇ ಇ.ಡಿ. ಅಧಿಕಾರಿಗಳು ಆರ್ಬಿಐಗೆ ಪತ್ರ ಬರೆದು, ಸಂಸ್ಥೆ ಗ್ರಾಹಕರಿಗೆ ಮೋಸ ಮಾಡುತ್ತಿದೆ. ಅದರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸೂಚಿಸಿತ್ತು. ಆದರೆ ಸಂಸ್ಥೆ ಯಾವುದೇ ತನಿಖೆ ನಡೆಸಿರಲಿಲ್ಲ.
ಆ್ಯಂಬಿಡೆಂಟ್ ಸಂಸ್ಥೆಯ ಮೇಲೆ ಇ.ಡಿ ದಾಳಿ ನಡೆಸಿ, ತನಿಖೆ ಆರಂಭಿಸಿತ್ತು. ಇದನ್ನು ಮುಚ್ಚಿಹಾಕಲು ಸಂಸ್ಥೆಯ ಮುಖ್ಯಸ್ಥ ಫರೀದ್ರಿಂದ ರೆಡ್ಡಿ ಹಣ ಪಡೆದಿದ್ದರು ಎಂಬುದು ಸದ್ಯದ ಆರೋಪ. ಆದರೆ ಇ.ಡಿ. ಪ್ರಕರಣದಲ್ಲಿ ತನಿಖೆಯೇ ನಡೆಸಿಲ್ಲ ಎನ್ನುವ ವಿಚಾರ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.
ಕೆಲ ವರ್ಷಗಳಿಂದ ರೆಡ್ಡಿ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದರು. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಕೆಲ ಸ್ಥಾನಗಳನ್ನು ಗೆಲ್ಲಲು ರೆಡ್ಡಿ ಪಾತ್ರವೂ ಇತ್ತು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಅವರು ನಿಲ್ಲುವ ಸಾಧ್ಯತೆಯೂ ಇತ್ತು. ಇದಕ್ಕೆ ಕಡಿವಾಣ ಹಾಕಲು ಶಡ್ಯಂತ್ರ ರೂಪಿಸಿ ಈ ರೀತಿ ಮಾಡಲಾಗಿದೆಯೇ ಎನ್ನುವುದು ಸದ್ಯದ ಪ್ರಶ್ನೆ.
Comments are closed.