ಬೆಂಗಳೂರು: ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಉಪಚುನಾವಣೆ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಅಲ್ಲದೇ, ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡುವ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು.
ಶಿವಮೊಗ್ಗ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ನಿಂದ ಸೂಕ್ತ ಅಭ್ಯರ್ಥಿ ಸಿಗದ ಕಾರಣಕ್ಕೆ ಈ ಕ್ಷೇತ್ರವನ್ನು ಉಪಚುನಾವಣೆಗೆ ಮಾತ್ರ ಅನ್ವಯವಾಗುವಂತೆ ಜೆಡಿಎಸ್ ಬಿಟ್ಟುಕೊಡಲು ವೇಣುಗೋಪಾಲ್ ಮತ್ತು ಮುಖಂಡರು ನಿರ್ಧರಿಸಿದರು. ಇಂದು ಬೆಂಗಳೂರಿಗೆ ಬಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ನಿರ್ಧಾರಕ್ಕೆ ಅಂಕಿತ ಹಾಕುವುದೊಂದೇ ಬಾಕಿ ಉಳಿಸಿದೆ.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿರುವ ಜಮಖಂಡಿ ವಿಧಾನಸಭೆ ಹಾಗೂ ಬಳ್ಳಾರಿ ಲೋಕಸಭೆ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಲಾಗಿದೆ. ಜಮಖಂಡಿಯಿಂದ ಆನಂದ್ ನ್ಯಾಮಗೌಡ ಹಾಗೂ ಬಳ್ಳಾರಿಯಿಂದ ಶಾಸಕ ನಾಗೇಂದ್ರ ಸಹೋದರ ವೆಂಕಟೇಶ ಪ್ರಸಾದ್ ಹೆಸರನ್ನು ಫೈನಲ್ ಮಾಡಲಾಗಿದ್ದು, ಇಂದು ರಾಹುಲ್ ಗಾಂಧಿ ಅವರು ಅಧಿಕೃತವಾಗಿ ಹೆಸರನ್ನು ಘೋಷಣೆ ಮಾಡಲಿದ್ದಾರೆ.
ನಿರೀಕ್ಷೆಯಂತೆ ಶಿವಮೊಗ್ಗ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಲಾಗಿದೆ. ಅದರಂತೆ ಜೆಡಿಎಸ್ನಿಂದ ಮಧುಬಂಗಾರಪ್ಪ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಮಧು ಬಂಗಾರಪ್ಪ ಅಭ್ಯರ್ಥಿ ಎಂಬುದನ್ನು ಕಳೆದ ಮೂರು ದಿನಗಳ ಹಿಂದೆಯೇ ಜೆಡಿಎಸ್ ವರಿಷ್ಠ ದೇವೇಗೌಡರು ಘೋಷಿಸಿದ್ದರು.
ಸಭೆಯಲ್ಲಿ ವೇಣುಗೋಪಾಲ್ ಅವರು ಉಪಚುನಾವಣೆಯ ಉಸ್ತುವಾರಿ, ಪ್ರಚಾರದ ಬಗ್ಗೆ ಚರ್ಚೆ ನಡೆಸಿದರು. ಅಲ್ಲದೇ, ಉತ್ತಮವಾಗಿ ಕಾರ್ಯನಿರ್ವಹಿಸದ ಸಚಿವರಿಗೆ ಮೌಲ್ಯಪಾಮನದ ಎಚ್ಚರಿಕೆ ನೀಡಿದರು. ಸಭೆಯಲ್ಲಿ ಕಾಂಗ್ರೆಸ್ನ ಎಲ್ಲ ಸಚಿವರು ಭಾಗಿಯಾಗಿದ್ದರು.
Comments are closed.