
ಬೆಂಗಳೂರು: ಆ ಶಿಕ್ಷಕಿ ಶಾಲೆಯೊಂದರಲ್ಲಿ ಸತತ 13.5 ವರ್ಷ ವೇತನವಿಲ್ಲದೆ ಕೆಲಸ ಮಾಡಿದ್ದಾರೆ. ಇದೀಗ ಅವರ ನೇಮಕಗೊಂಡು 25 ವರ್ಷವಾಗಿದೆ. ವೇತನ ಪಾವತಿಗೆ ಆಗ್ರಹಿಸಿ ನಿರಂತರ ಕಾನೂನು ಹೋರಾಟ ಕೈಗೊಂಡ ಹಲವು ವರ್ಷಗಳ ಬಳಿಕ ಇದೀಗ ಆಕೆಗೆ ಬಾಕಿ ವೇತನ ಪಾವತಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಎಲ್. ವಿದ್ಯಾವತಿ ಎಂಬವರು ಕೆಜಿಎಫ್ನ ಅರವಿಂದ ತಯ್ಯರ್ ಗರ್ಲ್ಸ್ ಸ್ಕೂಲ್ನಲ್ಲಿ 1992ಕ್ಕೆ ಸೇರಿಕೊಂಡಿದ್ದರು. ಆದರೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಣ ಇಲಾಖೆಯ ತಪ್ಪಿನಿಂದಾಗಿ ಅವರಿಗೆ 13.5 ವರ್ಷಗಳಲ್ಲಿ ಯಾವುದೇ ವೇತನ ಮತ್ತು ಭತ್ಯೆ ಪಾವತಿಯಾಗಿಲ್ಲ.
ಜತೆಗೆ 2001ರಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದರೂ, ಶಿಕ್ಷಣ ಇಲಾಖೆ ಅವರ ನೇಮಕಾತಿಯನ್ನು ಕೂಡ ಊರ್ಜಿತಗೊಳಿಸಿಲ್ಲ. ಈ ಬಗ್ಗೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರೂ, ವಿದ್ಯಾವತಿ ಅವರಿಗೆ ವೇತನ ಪಾವತಿಸಲು ಸಂಸ್ಥೆ ಕ್ರಮ ಕೈಗೊಂಡಿರಲಿಲ್ಲ.
2005ರಲ್ಲಿ ಹೈಕೋರ್ಟ್ ವಿದ್ಯಾವತಿ ಅವರಿಗೆ 1993ರಿಂದ 2006ವರೆಗಿನ ವೇತನ, ಭತ್ಯೆ ಮತ್ತು ಇತರ ಎಲ್ಲ ವೆಚ್ಚಗಳನ್ನು ಪಾವತಿಸುವಂತೆ ಆದೇಶಿಸಿತ್ತು. ಆದರೆ ಶಿಕ್ಷಣ ಇಲಾಖೆ ಮತ್ತು ಆಡಳಿತ ಮಂಡಳಿ ವೇತನ ಪಾವತಿಗೆ ಸೂಕ್ತ ಕ್ರಮ ಕೈಗೊಂಡಿರಲಿಲ್ಲ.
ನಂತರ ಕಳೆದ ವಾರ ಜೂನ್ 19ರಂದು ಹೈಕೋರ್ಟ್ ತೀರ್ಪು ನೀಡಿದ್ದು, ಶಿಕ್ಷಕಿಗೆ ಬಾಕಿ ವೇತನ ಪಾವತಿಸಲು ಶಿಕ್ಷಣ ಇಲಾಖೆ ಮತ್ತು ಶಾಲೆ ತಪ್ಪಿದಲ್ಲಿ, ಶಾಲೆಯ ಎಲ್ಲ ಸೊತ್ತುಗಳನ್ನು ತಹಶೀಲ್ದಾರ್ ಅವರು ವಶಪಡಿಸಿಕೊಂಡು, ಹರಾಜು ಹಾಕಿ ಶಿಕ್ಷಕಿಗೆ ವೇತನ ಪಾವತಿಸಬೇಕು ಎಂದು ಸೂಚನೆ ನೀಡಿದೆ.
Comments are closed.