ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಕನ್ನಡದಲ್ಲೇ ಭಾಷಣ ಆರಂಭಿಸಿದಾಗ ಸಭಿಕರು ‘ಓ’ ಎಂದು ಸಂಭ್ರಮಿಸಿದರು.
‘ಕರ್ನಾಟಕದ ನನ್ನ ಪ್ರೀತಿಯ ಬಂಧು ಭಗಿನಿಯರೆ ನಿಮಗೆಲ್ಲ ನನ್ನ ನಮಸ್ಕಾರಗಳು. ನಾಡಪ್ರಭು ಕೆಂಪೇಗೌಡರು, ಮಹಾತ್ಮ ಬಸವೇಶ್ವರರು, ಮಾದಾರ ಚೆನ್ನಯ್ಯ, ವೀರರಾಣಿ ಕಿತ್ತೂರು ಚೆನ್ನಮ್ಮಾ, ಸಂಗೊಳ್ಳಿ ರಾಯಣ್ಣ, ಶಿಶುನಾಳ ಷರೀಫ, ಸರ್.ಎಂ. ವಿಶ್ವೇಶ್ವರಯ್ಯ ಅವರಂತಹ ಮಹಾಪುರುಷರ ನಾಡು ಕರ್ನಾಟಕ. ನವ ಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನೆ ಮಾಡಲು ಬಿಜೆಪಿಯನ್ನು ಗೆಲ್ಲಿಸಿ’ ಎಂದು ಮೋದಿ ಕನ್ನಡದಲ್ಲೇ ಕೋರಿದರು.
ಭಾಷಣದ ಕೊನೆಯಲ್ಲಿ ಕೂಡ ಕನ್ನಡ ಬಳಸಿದ ಮೋದಿ, ‘ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ’ ಎಂದರು.
ಸಚಿವ ಹೆಗಡೆಗೆ ಹರ್ಷೋದ್ಗಾರ: ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೆಸರನ್ನು ನರೇಂದ್ರ ಮೋದಿ ಉಲ್ಲೇಖಿಸಿದಾಗ ಸಭಿಕರ ಕಡೆಯಿಂದ ಹರ್ಷೋದ್ಗಾರ ಕೇಳಿಬಂತು.
ಭಾಷಣ ಆರಂಭಿಸಿದ ಮೋದಿ, ಕೇಂದ್ರ ಸಚಿವ ಅನಂತಕುಮಾರ್, ಸದಾನಂದಗೌಡ, ಯಡಿಯೂರಪ್ಪ, ಎಸ್.ಎಂ. ಕೃಷ್ಣ, ಜಗದೀಶ ಶೆಟ್ಟರ್, ಕೆ.ಎಸ್. ಈಶ್ವರಪ್ಪ ಸೇರಿದಂತೆ ವೇದಿಕೆಯಲ್ಲಿದ್ದ ಎಲ್ಲರ ಹೆಸರುಗಳನ್ನು ಹೇಳಿದರು. ಯಾರ ಹೆಸರು ಉಲ್ಲೇಖಿಸಿದಾಗಲೂ ಜನರಿಂದ ಸ್ಪಂದನೆ ಇರಲಿಲ್ಲ. ಸಚಿವ ಸಹೋದ್ಯೋಗಿ ಅನಂತಕುಮಾರ ಹೆಗಡೆ ಎಂದು ಹೇಳುತ್ತಿದ್ದಂತೆ ‘ಹೋ’ ಎಂದು ಕೂಗು ಎಲ್ಲ ದಿಕ್ಕಿನಿಂದ ಹರಿದುಬಂತು.
ಯಡಿಯೂರಪ್ಪ ಭಾಷಣ ಮಾಡುವಾಗ ಹೆಗಡೆ ಹೆಸರು ಉಲ್ಲೇಖಿಸಿದರು. ಆಗಲೂ ಜನ ‘ಹೋ’ ಎಂದರು.
Comments are closed.