ಕರ್ನಾಟಕ

ದಲಿತರು ಕಾಂಗ್ರೆಸ್‌ಗೆ ಮತ ಹಾಕಬಾರದು: ಯಡಿಯೂರಪ್ಪ

Pinterest LinkedIn Tumblr


ಕೋಲಾರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ ಅವರನ್ನು ಕಾಂಗ್ರೆಸ್‌ ವೋಟ್‌ ಬ್ಯಾಂಕ್‌ಗೆ ಬಳಸಿಕೊಂಡಿದ್ದು, ರಾಜಕೀಯವಾಗಿ ಅವಮಾನ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡ್ಯೂರಪ್ಪ ಹೇಳಿದ್ದಾರೆ.

ಕೋಲಾರದ ಶ್ರೀನಿವಾಸಪುರದಲ್ಲಿ ಮಾತನಾಡಿರುವ ಬಿಎಸ್‌ವೈ, ‘ದಲಿತರು ಕಾಂಗ್ರೆಸ್‌ಗೆ ಯಾವುದೇ ಕಾರಣಕ್ಕೂ ಮತನೀಡಬೇಡಿ. ಕಾಂಗ್ರೆಸ್‌ ಅಧಿಕಾರಿದಲ್ಲಿದ್ದಷ್ಟೂ ವರ್ಷ ಅಂಬೇಡ್ಕರ್ ಅವರಿಗೆ ಭಾರತರತ್ನ ಕೊಡಲಿಲ್ಲ, ರಾಜಕೀಯವಾಗಿ ಅವರಿಗೆ ಅವಮಾನ ಮಾಡಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ ಅಂದು ರಾಜ್ಯದ ಜನರು ಮೋಸ ಹೋಗಿ ಕಾಂಗ್ರೆಸ್‌ಗೆ ಅಧಿಕಾರ ನೀಡಿದ್ದರು, ಆದರೆ ದೇಶದಲ್ಲೇ ಕಾಂಗ್ರೆಸ್‌ ನೆಲಕಚ್ಚಿದೆ, ಕಾಂಗ್ರೆಸ್ ಬಣ್ಣ ಬಯಲಾಗಿದೆ. ಇದೀಗ ಕಾಂಗ್ರೆಸ್‌ನಲ್ಲಿ ರಾಹುಲ್‌ ಗಾಂಧಿ ಮತ್ತು ಸೋನಿಯಾ ಗಾಂಧಿ ಮಾತ್ರಾ ಉಳಿದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇಂತಹ ತಪ್ಪು ಮಾಡಬೇಡಿ, ಈ ಬಾರಿ ಕಾಂಗ್ರೆಸ್‌ಗೆ ಯಾವುದೇ ಕಾರಣಕ್ಕೂ ಅಧಿಕಾರ ನೀಡಬೇಡಿ’ ಎಂದು ಬಿಎಸ್‌ವೈ ಮನವಿ ಮಾಡಿದ್ದಾರೆ.

ಶ್ರೀನಿವಾಸಪುರದಲ್ಲಿ ಮಾತನಾಡಿರುವ ಕೇಂದ್ರ ಸಚಿವ ಸದಾನಂದಗೌಡ, ಕಾಂಗ್ರೆಸ್‌ನವರು ಕೋಲಾರದ ಜನರಿಗೆ ನೀರಾವರಿ ಹೆಸರಿನಲ್ಲಿ ವಿಷ ಕುಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ‘ ನೀರಾವರಿ ಯೋಜನೆ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಕಾಂಗ್ರೆಸ್ ಲೂಟಿ ಮಾಡಿದೆ. ನಾವು ಕರಾವಳಿ ಭಾಗದ ಜನರ ವಿರೋಧದ ನಡುವೆ ಎತ್ತಿನಹೊಳೆ ಯೋಜನೆಗೆ ಒತ್ತು ನೋಡಿದ್ದೇವೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಎತ್ತಿನಹೊಳೆ ಯೋಜನೆಗೆ ನಮ್ಮ ಸರಕಾರವೇ ಪೂಜೆ ಮಾಡುವುದು’ ಎಂದು ಹೇಳಿದ್ದಾರೆ.

ಇದೇ ವೇಳೆ ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಕೊಲೆ ಕುರಿತು ಕಾಂಗ್ರೆಸ್‌ ಸರಕಾರದ ವಿರುದ್ಧ ಕಿಡಿಕಾರಿದ ಸದಾನಂದಗೌಡ, ‘ಕರ್ನಾಟಕದಲ್ಲಿ ಇರುವುದು ಕೊಲೆಗೆಡುಕರ ಸರಕಾರ, ಇಲ್ಲಿ ಕಾನೂನು ಸುವ್ಯವಸ್ಥೆ ಹದೆಗೆಟ್ಟಿದೆ. ಹೆಣ್ಣು ಮಕ್ಕಳು ಮನೆಯಿಂದ ಹೊರಬರದಂತ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಹೇಳಿದ್ದಾರೆ.

Comments are closed.