
ಮೈಸೂರು: ‘‘ಬಿಜೆಪಿ, ಆರ್ಎಸ್ಎಸ್ ಸೇರಿದಂತೆ ಸಂಘ ಪರಿವಾರದವರೇ ಉಗ್ರಗಾಮಿಗಳು’’ ಎಂಬ ತಮ್ಮ ಹೇಳಿಕೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
‘‘ಬಿಜೆಪಿಯವರನ್ನು ಹಿಂದುತ್ವದ ಉಗ್ರಗಾಮಿಗಳು ಅಂತ ಹೇಳಿದ್ದೇನೆ. ಹೆಣದ ಮೇಲೆ ರಾಜಕೀಯ ಮಾಡುವವರನ್ನು ಮತ್ತೇನಂತ ಕರೀಬೇಕು? ಸಾವಿನ ಮನೆಯಲ್ಲಿ ರಾಜಕಾರಣ ಮಾಡುತ್ತಿರುವವರು ಯಾರು? ಬಿಜೆಪಿಯವರು ವೋಟುಗಳ ಧ್ರುವೀಕರಣಕ್ಕೆ ಹೊರಟಿದ್ದಾರೆ. ಚುನಾವಣೆ ಬಂದಿರುವಾಗ ಹೀಗೆ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಲಾಭವಾಗಲಿದೆ ಎಂದು ಭಾವಿಸಿದ್ದಾರೆ. ಆದರೆ ಅವರಿಗೆ ಇದು ಮುಳುವಾಗಲಿದೆ. ಇದನ್ನು ಅವರು ಸರಿಯಾಗಿ ಅರ್ಥಮಾಡಿಕೊಳ್ಳುತ್ತಿಲ್ಲ’’ ಎಂದು ಸಿದ್ದರಾಮಯ್ಯ ಗುರುವಾರ ಮಧ್ಯಾಹ್ನ ಇಲ್ಲಿನ ಮಂಡಕಳ್ಳಿ ವಿಮಾನನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡುತ್ತಾ ವಾಗ್ದಾಳಿ ನಡೆಸಿದರು.
‘‘ನಾನ್ಯಾರು? ನಾನೂ ಹಿಂದೂ. ನೀವು ಹಿಂದೂ ಅಲ್ವಾ? ಆದರೆ, ನಾವು ಮನುಷ್ಯತ್ವ ಇರುವ ಹಿಂದೂಗಳು. ಬಿಜೆಪಿಯವರು ಮನುಷ್ಯತ್ವ ಇಲ್ಲದ ಹಿಂದೂಗಳು’’ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಸಂಘ ಪರಿವಾರ, ಪಿಎಫ್ಐ, ಎಸ್ಡಿಪಿಐ ಯಾರೇ ಆಗಿರಲಿ ಕೋಮು ಸಾಮರಸ್ಯ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ನನ್ನ ಹೇಳಿಕೆ ವಿರುದ್ಧ ಬಿಜೆಪಿಯವರು ಪ್ರತಿಭಟಿಸಿದರೆ ಪ್ರತಿಭಟಿಸಲಿ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕು ಎಲ್ಲರಿಗೂ ಇದೆ ಎಂದರು ಸಿದ್ದರಾಮಯ್ಯ.
Comments are closed.