ಕರ್ನಾಟಕ

ಲಾಡು ದುಡ್ಡು ತಿಂದು ಸಿಕ್ಕಿಬಿದ್ದ BMTC ಅಧಿಕಾರಿಗಳು!

Pinterest LinkedIn Tumblr

-ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರು

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಚಾಲಕ, ನಿರ್ವಾಹಕರು ಮತ್ತು ಇತರೆ ಸಿಬ್ಬಂದಿಗೆ ಸಿಹಿ ತಿಂಡಿ ಹಂಚಲು ನೀಡಿದ್ದ ಹಣವನ್ನು ಡಿಪೊ ಅಧಿಕಾರಿಗಳೇ ಲಪಟಾಯಿಸಿ ಅಕ್ರಮವೆಸಗಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಡಿಪೊ ಅಧಿಕಾರಿಗಳು ಕದ್ದ ಹಣ ದೊಡ್ಡ ಮೊತ್ತ ಅಲ್ಲದಿದ್ದರೂ ಅಧಿಕಾರಿಗಳ ಭ್ರಷ್ಟಾಚಾರದ ಮುಖವಾಡ ಕಳಚಿ ಬಿದ್ದಿದೆ. ಲಾಡು ದುಡ್ಡನ್ನು ಭೂಕಂಪ ಸಂತ್ರಸ್ತರಿಗೆ ದೇಣಿಗೆ ನೀಡುತ್ತಿರುವುದಾಗಿ ನೌಕರರನ್ನು ನಂಬಿಸಿ, ಸುಮಾರು 25 ಸಾವಿರ ರೂ.ಗಳನ್ನು ವಂಚಿಸಲಾಗಿದೆ.

2015ರಲ್ಲಿಕಾರ್ಮಿಕ ದಿನಾಚರಣೆಯಂದು ಪ್ರತಿ ವರ್ಷದಂತೆ ಸಿಹಿ ವಿತರಿಸಲು ಪ್ರತಿ ನೌಕರರಿಗೆ ತಲಾ 10 ರೂ.ಗಳಂತೆ ಎಲ್ಲ ಡಿಪೊಗಳಿಗೆ ಮುಂಗಡವಾಗಿ ಹಣ ಒದಗಿಸಲು ವ್ಯವಸ್ಥಾಪಕ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದರು. ಅದರಂತೆ ಕೇಂದ್ರ ವಿಭಾಗ ಮತ್ತು ಆಯಾ ವಿಭಾಗಗಳ ಲೆಕ್ಕಪತ್ರ ಶಾಖೆಯಿಂದ ಹಣ ಪಡೆದ ಆರೋಪಿಗಳು, ಕಾರ್ಮಿಕರಿಗೆ ಲಡ್ಡು ಹಂಚದೆ ಅಕ್ರಮವೆಸಗಿರುವುದು ತನಿಖೆಯಿಂದ ಬಯಲಾಗಿದೆ.

ಡಿಪೊಗಳಲ್ಲಿನ ಅಧಿಕಾರಿಗಳು, ತಮ್ಮಲ್ಲಿರುವ ಸಿಬ್ಬಂದಿ ಸಂಖ್ಯೆಗೆ ಅನುಗುಣವಾಗಿ ಸಿಹಿ ಲಡ್ಡು ಖರೀದಿ ಮಾಡಿ ವಿತರಿಸಬೇಕಿತ್ತು. ಆದರೆ, ಯಶವಂತಪುರದಲ್ಲಿನ ಡಿಪೊ 8 ಮತ್ತು 26ರಲ್ಲಿನ ಅಧಿಕಾರಿಗಳು ಚಾಲಕ, ನಿರ್ವಾಹಕರು ಮತ್ತು ಇತರೆ ನೌಕರರಿಗೆ ಲಡ್ಡು ವಿತರಿಸದೆಯೇ ವಂಚನೆ ಎಸಗಿದ್ದಾರೆ. ಅಕ್ರಮದ ಬಗ್ಗೆ ಸಿಬ್ಬಂದಿ ದೂರನ್ನು ಗಂಭೀರವಾಗಿ ಪರಿಗಣಿಸಿದ್ದ ವ್ಯವಸ್ಥಾಪಕ ನಿರ್ದೇಶಕರು ತನಿಖೆಗೆ ಆದೇಶಿಸಿದ್ದರು. ನಿವೃತ್ತ ಜಿಲ್ಲಾ ನ್ಯಾಯಾಧೀಶ ಚನ್ನಬಸಪ್ಪ ಎಸ್‌.ಮಾಳಗಿ ಅವರನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು.

ಸಿಕ್ಕಿಬಿದ್ದವರು 6 ಮಂದಿ

ಬಿಎಂಟಿಸಿಯ ಘಟಕ 26ರಲ್ಲಿಲೆಕ್ಕಪತ್ರ ಮೇಲ್ವಿಚಾರಕರಾಗಿದ್ದ ಪಿ.ವೆಂಕಟೇಶ್‌ (ಪ್ರಸ್ತುತ 10ನೇ ಡಿಪೊದಲ್ಲಿದ್ದಾರೆ), ಡಿಪೊ ಮ್ಯಾನೇಜರ್‌ ಸುಧೀರ್‌ (ಸದ್ಯ ಕೆಎಸ್‌ಆರ್‌ಟಿಸಿ ಮೈಸೂರು ನಗರ ಸಾರಿಗೆಯಲ್ಲಿಸಂಚಾರ ಅಧಿಕಾರಿ), ಸಿಬ್ಬಂದಿ ಮೇಲ್ವಿಚಾರಕಿ ಕೆ.ವಿ.ಅನಂತಲಕ್ಷ್ಮಿ (ಸದ್ಯ 45ನೇ ಡಿಪೊದಲ್ಲಿದ್ದಾರೆ), 8ನೇ ಡಿಪೊದ ಲೆಕ್ಕಪತ್ರ ಮೇಲ್ವಿಚಾರಕ ಡಿ.ಸಿದ್ದಪ್ಪ (ಪ್ರಸ್ತುತ 40ನೇ ಡಿಪೊದಲ್ಲಿದ್ದಾರೆ), ಸಿಬ್ಬಂದಿ ಅಧೀಕ್ಷಕಿ ಪಿ.ಸಾವಿತ್ರಿ ಮತ್ತು ನಗದು ಗುಮಾಸ್ತ/ಸಹಾಯಕ ಮುನಿರಾಜು ಅವರು ಲಡ್ಡು ದುಡ್ಡನ್ನು ಕದ್ದಿರುವುದು ತನಿಖೆಯಿಂದ ರುಜುವಾತಾಗಿದೆ.

ಅಕ್ರಮಕ್ಕೆ ಭೂಕಂಪ ಸಂತ್ರಸ್ತರ ಗುರಾಣಿ

ಡಿಪೊ 26ರಲ್ಲಿನ 1215 ಸಿಬ್ಬಂದಿಗಳಿಗೆ ಸಿಹಿ ಹಂಚಲು ತಲಾ 10 ರೂ.ಗಳಂತೆ 12150 ರೂ. ಮಂಜೂರು ಮಾಡಲಾಗಿತ್ತು. ಲೆಕ್ಕಪತ್ರ ಶಾಖೆಯಿಂದ ಮುಂಗಡವಾಗಿ ಹಣವನ್ನು ಪಡೆಯಲಾಗಿತ್ತು. ಬಳಿಕ ಡಿಪೊ ಮ್ಯಾನೇಜರ್‌ ಸುಧೀರ್‌, 12150 ರೂ.ಗಳನ್ನು ಎಲ್ಲ ಕಾರ್ಮಿಕರ ಮನವಿ ಮೇರೆಗೆ ನೇಪಾಳ ಭೂಕಂಪ ಸಂತ್ರಸ್ತರಿಗೆ ನೀಡಲು ವಿಭಾಗೀಯ ನಿಯಂತ್ರಣಾಧಿಕಾರಿಗೆ ಸಲ್ಲಿಸಲಾಗಿದೆ ಎಂದು ಆರ್‌ಟಿಐ ಅರ್ಜಿದಾರರಿಗೆ ಸುಳ್ಳು ಮಾಹಿತಿ ನೀಡಿದ್ದರು.

ಈ ಬಗ್ಗೆ ಆರ್‌ಟಿಐ ಅಡಿ ಉತ್ತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಬಳಿ ಮಾಹಿತಿ ಕೇಳಿದಾಗ ಭೂಕಂಪ ಸಂತ್ರಸ್ತರಿಗೆ ದೇಣಿಗೆ ನೀಡಲು ಹಣವನ್ನೇ ಕೊಟ್ಟಿರಲಿಲ್ಲ. ಬದಲಿಗೆ 22 ಕೆ.ಜಿ ಲಡ್ಡು ಖರೀದಿಸಿ, ಕಾರ್ಮಿಕರಿಗೆ ವಿತರಣೆ ಮಾಡಲಾಗಿದೆ ಎಂಬುದಾಗಿ ಸುಳ್ಳು ರಶೀದಿಗಳನ್ನು ನೀಡಿರುವುದು ಬಯಲಾಯಿತು.

ಲಡ್ಡುವಿನ ದುಡ್ಡು ಲಪಟಾಯಿಸಲು ಆರೋಪಿಗಳು ನಕಲಿ ಬಿಲ್‌ಗ‌ಳನ್ನು ಸೃಷ್ಟಿಸಿದ್ದರು. 22 ಕೆ.ಜಿ ಸಿಹಿ ಲಡ್ಡು ಖರೀದಿ ಮಾಡಿರುವುದಕ್ಕೆ ಸಂಬಂಧಿಸಿದಂತೆ ಬೇಕರಿಯೊಂದರಿಂದ ನಕಲಿ ಬಿಲ್‌ ಪಡೆದು, ವಂಚಿಸಲಾಗಿತ್ತು. ಇದೇ ರೀತಿ ಡಿಪೊ 8ರಲ್ಲಿನೌಕರರಿಗೆ ಲಡ್ಡು ಹಂಚಲು 13,420 ರೂ.ಗಳನ್ನು ಮುಂಗಡವಾಗಿ ಪಡೆಯಲಾಗಿದೆ. ಆದರೆ, ಸಿಬ್ಬಂದಿಗೂ ಸಿಹಿ ವಿತರಿಸದೆ ಆ ಹಣವನ್ನು ಮೂವರು ಅಧಿಕಾರಿಗಳು ಜೇಬಿಗೆ ಇಳಿಸಿದ್ದಾರೆ.

ಕಠಿಣ ಕ್ರಮದ ಬದಲಿಗೆ ಬಡ್ತಿ ಶಿಕ್ಷೆ

ಕಾರ್ಮಿಕರ ಲಡ್ಡು ದುಡ್ಡನ್ನು ಕದ್ದು ತಿಂದ ಆರೋಪಿತರಿಗೆ ಕಠಿಣ ಶಿಕ್ಷೆ ವಿಧಿಸುವ ಬದಲಿಗೆ ಬಡ್ತಿ ನೀಡಲಾಗಿದೆ. ಕೆಲವರಿಗೆ ವೇತನ ಕಡಿತ ಮತ್ತು ಅಲ್ಪ ಪ್ರಮಾಣದ ದಂಡದ ಶಿಕ್ಷೆ ವಿಧಿಸಲಾಗಿದೆ ಎಂಬ ದೂರು ಕೇಳಿಬಂದಿದೆ.

ಘಟಕ 26ರ ವ್ಯವಸ್ಥಾಪಕ ಸುಧೀರ್‌ ಅವರಿಗೆ ಎರಡು ವರ್ಷದ ವಾರ್ಷಿಕ ವೇತನ ಬಡ್ತಿ ತಡೆ ಹಿಡಿದು, 12150 ರೂ. ದುರುಪಯೋಗದ ಹಣದ ಪೈಕಿ 4050 ರೂ.ಗಳನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಮಧ್ಯೆ ಅವರಿಗೆ ಬಡ್ತಿ ನೀಡಿ ಕೆಎಸ್‌ಆರ್‌ಟಿಸಿಯ ಮೈಸೂರು ನಗರ ಸಾರಿಗೆಗೆ ವರ್ಗಾವಣೆ ಮಾಡಲಾಗಿದೆ. ಹಾಗೆಯೇ, ಪಿ.ವೆಂಕಟೇಶ್‌ ಮತ್ತು ಕೆ.ವಿ.ಅನಂತಲಕ್ಷ್ಮಿ ಅವರಿಗೆ ವೇತನ ಬಡ್ತಿ ತಡೆದು ಸಾಧಾರಣ ಶಿಕ್ಷೆ ವಿಧಿಸಲಾಗಿದೆ ಎಂದು ಚಾಲಕನಿರ್ವಾಹಕರು ಆರೋಪಿಸಿದ್ದಾರೆ.

8ನೇ ಡಿಪೊದ ಡಿ.ಸಿದ್ದಪ್ಪ ಅವರ ಅಕ್ರಮಕ್ಕೆ ಸಂಬಂಧಿಸಿದಂತೆ 2 ವರ್ಷದ ವೇತನ ಬಡ್ತಿ ತಡೆ ಹಿಡಿದು, ದುರುಪಯೋಗದ ಹಣ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಪಿ.ಸಾವಿತ್ರಿ ಮತ್ತು ಮುನಿರಾಜು ಅವರಿಗೆ 40 ಸಾವಿರ ರೂ. ದಂಡ ವಿಧಿಸಲಾಗಿದೆ. ಆದರೆ, ಯಾರನ್ನೂ ಅಮಾನತುಗೊಳಿಸಿಲ್ಲ. ಇದೇ ತಪ್ಪನ್ನು ಚಾಲಕನಿರ್ವಾಹಕರು ಮಾಡಿದ್ದರೆ, ಸೇವೆಯಿಂದ ಅಮಾನತು ಮಾಡಲಾಗುತ್ತಿತ್ತು. ಆದರೆ, ತಪ್ಪಿತಸ್ಥ ಅಧಿಕಾರಿಗಳಿಗೆ ಯಾವುದೇ ಶಿಕ್ಷೆಯಾಗುತ್ತಿಲ್ಲ ಎಂದು ಚಾಲಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

Comments are closed.