ಕರ್ನಾಟಕ

ಜಾರ್ಜ್‌ ರಾಜೀನಾಮೆ: ಪಟ್ಟು ಸಡಿಲಿಸಿದ ಬಿಜೆಪಿ

Pinterest LinkedIn Tumblr


ಬೆಳಗಾವಿ: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್‌ಐಆರ್‌ ದಾಖಲಿಸಿರುವ ಹಿನ್ನೆಲೆಯಲ್ಲಿ ಸಚಿವ ಕೆ.ಜೆ. ಜಾರ್ಜ್‌ ರಾಜೀನಾಮೆಗೆ ಒತ್ತಾಯಿಸಿ ಉಭಯ ಸದನಗಳಲ್ಲಿ ಧರಣಿ ನಡೆಸಿದ್ದ ಬಿಜೆಪಿ ತನ್ನ ಪಟ್ಟು ಸಡಿಲಿಸಿದೆ.
ವಿಧಾನಪರಿಷತ್‌ನಲ್ಲಿ ಸೋಮವಾರ ಧರಣಿ ನಡೆಸಿ ಸುಮ್ಮನಾಗಿದ್ದ ಬಿಜೆಪಿ ಬುಧವಾರ ವಿಧಾನಸಭೆಯಲ್ಲೂ ಈ ವಿಚಾರವನ್ನು ಹೆಚ್ಚು ಬೆಳೆಸಲು ಹೋಗದೆ ಚರ್ಚೆಗೆ ಅವಕಾಶ ನೀಡುವುದಾಗಿ ಸ್ಪೀಕರ್‌ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧರಣಿ ವಾಪಸ್‌ ಪಡೆಯಿತು.

ಬುಧವಾರ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ವಿಷಯ ಪ್ರಸ್ತಾವಿಸಿ, ಸಚಿವ ಜಾರ್ಜ್‌ ರಾಜೀನಾಮೆ ವಿಚಾರವನ್ನು ಚರ್ಚೆಗೆ ಅವಕಾಶ ಕೊಡುವಂತೆ ಒತ್ತಾಯಿಸಿದರು. ಸಿಬಿಐ ತನಿಖೆ ಸಂದರ್ಭ ಗಣಪತಿ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಬುಲೆಟ್‌ ಪತ್ತೆಯಾಗಿದೆ. ಇದು ಸಾಕಷ್ಟು ಅನುಮಾನಕ್ಕೆ ಕಾರಣ ವಾಗಿದೆ. ಇದೊಂದು ಗಂಭೀರ ವಿಚಾರ ಎಂದರು.

ಆದರೆ ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರು ಚರ್ಚೆಗೆ ಅವಕಾಶ ಕೊಡಬಾರದು ಎಂಬ ಆಗ್ರಹ ಮುಂದು
ವರಿಸಿದರು. ಈ ಸಂದರ್ಭ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧಾವಿಸಿ ಧರಣಿ ಆರಂಭಿಸಿದರು. ಈ ಕುರಿತು ಚರ್ಚೆಗೆ ಬೇರೆ ಸಮಯದಲ್ಲಿ ಅವಕಾಶ ನೀಡುವುದಾಗಿ ಸ್ಪೀಕರ್‌ ಭರವಸೆಯಿತ್ತ ಬಳಿಕ ಧರಣಿ ಹಿಂಪಡೆದರು. ಪ್ರಶ್ನೋತ್ತರ ಕಲಾಪದ ಅನಂತರ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಆರಂಭಿಸ ಲಾಯಿತು. ಹೀಗಾಗಿ, ಬಿಜೆಪಿ ಮತ್ತೆ ಜಾರ್ಜ್‌ ರಾಜೀನಾಮೆ ವಿಚಾರ ಪ್ರಸ್ತಾವಿಸಲು ಹೋಗಲಿಲ್ಲ.

ಮೂಲಗಳ ಪ್ರಕಾರ, ಜಾರ್ಜ್‌ ವಿಚಾರದಲ್ಲಿ ಬಿಗಿ ನಿಲುವು ಬೇಡ. ಧರಣಿ ನಡೆಸಿ ಕಲಾಪಕ್ಕೆ ಅಡ್ಡಿ ಮಾಡಿದರೆ ಉತ್ತರ ಕರ್ನಾಟಕ ಭಾಗದ ಜನರ ಆಕ್ರೋಶಕ್ಕೆ ತುತ್ತಾಗಬಹುದು. 3 ದಿನಗಳ ಕಾಲ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚಿಸಲು ಅವಕಾಶ ನೀಡಿರುವುದರಿಂದ ಅದನ್ನು ಸದುಪಯೋಗಪಡಿಸಿ ಕೊಂಡು ಸರಕಾರದ ವೈಫಲ್ಯ ತಿಳಿಸುವುದು ಸೂಕ್ತ ಎಂದು ಬಿಜೆಪಿ ಶಾಸಕ ಪಕ್ಷದ ಸಭೆಯಲ್ಲೂ ಚರ್ಚಿಸಲಾಗಿತ್ತು.

-ಉದಯವಾಣಿ

Comments are closed.