ಕರ್ನಾಟಕ

ಬಿಡುಗಡೆ ಭಾಗ್ಯ ಕಾಣದ ಬಿಎಸ್‌ವೈ ಆ್ಯಪ್‌

Pinterest LinkedIn Tumblr


ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಮತ್ತು ಬಿಜೆಪಿಯ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನ ಯಾತ್ರೆಯ ಪ್ರತಿಕ್ಷಣದ ಮಾಹಿತಿಯನ್ನು ಜನರಿಗೆ ತಲುಪಿಸಲು ಸಿದ್ಧಪಡಿಸಿರುವ ಬಿಎಸ್‌ವೈ ಆ್ಯಪ್‌ಗೆ ಇನ್ನೂ ಬಿಡುಗಡೆಯ ಭಾಗ್ಯ ಸಿಕ್ಕಿಲ್ಲ.

ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ದಿಂದ ಪರಿವರ್ತನ ಯಾತ್ರೆ ಆರಂಭವಾಗಿದೆ. ಯಾತ್ರೆಯ ಪ್ರತಿ ಕ್ಷಣದ ಮಾಹಿತಿಯನ್ನು ಆ್ಯಪ್‌ ಮೂಲಕ ಜನರಿಗೆ ತಲುಪಿಸಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ಉದ್ದೇಶದಿಂದ ಬಿಎಸ್‌ವೈ ಆ್ಯಪ್‌ ಸಿದ್ಧಪಡಿಸಲಾಗಿದೆ.

“ಈಗ ನಿಮ್ಮ ನಾಯಕ ನಿಮ್ಮ ಅಂಗೈಯಲ್ಲಿ ಮತ್ತು ಸಮರ್ಪಣೆ, ಪ್ರಗತಿ, ಚೈತನ್‌’ ಎಂಬ ಘೋಷವಾಕ್ಯಗಳೊಂದಿಗೆ ಬಿಎಸ್‌ವೈ ಆ್ಯಪ್‌ ಸಿದ್ಧಪಡಿಸಲಾಗಿದೆ. ಗುರುವಾರ ಯಾತ್ರೆಗೆ ಚಾಲನೆ ನೀಡುವ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಇದನ್ನು ಬಿಡುಗಡೆ ಮಾಡಬೇಕಿತ್ತು. ಆದರೆ, ಆ ವೇಳೆ ಉಂಟಾದ ಕೆಲವು ಗೊಂದಲಗಳಿಂದಾಗಿ ಆ್ಯಪ್‌ ಬಿಡುಗಡೆ ಮಾಡದೆ ಅವರು ದಿಲ್ಲಿಗೆ ವಾಪಸಾಗಿದ್ದರು.

ಅನಂತರದಲ್ಲಿ ಆ್ಯಪ್‌ ಬಿಡುಗಡೆ ಆಗಿಲ್ಲ. ಇದರಿಂದಾಗಿ ಆ್ಯಪ್‌ ಮೊಬೈಲ್‌ ಪ್ಲೇಸ್ಟೋರ್‌ನಲ್ಲಿ ಲಭ್ಯವಿದೆಯಾದರೂ ಅದನ್ನು ಡೌನ್‌ಲೋಡ್‌ ಮಾಡಿದರೆ ಬಳಸಲು ಸಾಧ್ಯವಾಗುತ್ತಿಲ್ಲ. ಆ್ಯಪ್‌ ಡೌನ್‌ಲೋಡ್‌ ಮಾಡಿದ ಬಳಿಕ ಹೆಸರು, ಮೊಬೈಲ್‌ ಸಂಖ್ಯೆ ನಮೂದಿಸಲು ಹೇಳುತ್ತದೆ. ಅದರಂತೆ ಮಾಹಿತಿ ಅಪ್‌ಲೋಡ್‌ ಮಾಡಿದ ಬಳಿಕ ಆ್ಯಪ್‌ ಕ್ಲೋಸ್‌ ಆಗುತ್ತದೆಯೇ ಹೊರತು ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ.

-ಉದಯವಾಣಿ

Comments are closed.