ಕರ್ನಾಟಕ

ಶಿವಸೇನೆ ಜತೆ ಸೇರಿ ಬಿಜೆಪಿಗೆ ತಕ್ಕ ಪಾಠ ಕಲಿಸುವೆ: ಮುತಾಲಿಕ್‌

Pinterest LinkedIn Tumblr


ಕಲಬುರಗಿ: “ನನ್ನ ಅವಶ್ಯಕತೆ ಇದ್ದಾಗ ಬಳಸಿಕೊಂಡು, ಹೊಂದಾಣಿಕೆ ಮಾಡಿಕೊಂಡು ಈಗ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೊಡದ ಬಿಜೆಪಿಗೆ ಶಿವಸೇನೆ ಜತೆ ಸೇರಿ ತಕ್ಕ ಪಾಠ ಕಲಿಸುತ್ತೇನೆ’ ಎಂದು ಶ್ರೀರಾಮಸೇನಾ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಹೇಳಿದರು.

ನಗರದಲ್ಲಿ ಗುರುವಾರ ಮಾತನಾಡಿ, “ಕಳೆದ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಶ್ರಮವೂ ಸಾಕಷ್ಟಿದೆ. ಶ್ರೀರಾಮಸೇನೆ, ಭಜರಂಗದಳ ಮತ್ತು ಇತರ ಹಿಂದೂ ಸಂಘಟನೆಗಳ ಬೆಂಬಲ ಪಡೆಯುವ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಈಗ ಅದನ್ನು ಮರೆತಿದೆ. 2018ರ ಚುನಾವಣೆಯಲ್ಲಿ ಸ್ಪರ್ಧಿಸಲು ನನಗೆ ಕ್ಷೇತ್ರವೊಂದನ್ನು ನೀಡಲು ಮೀನಾಮೇಷ ಎಣಿಸುತ್ತಿದೆ. ಅದರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದರು. “ನಾನು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎನ್ನುವ ಕುರಿತು ಇನ್ನೂ ನಿರ್ಧರಿಸಿಲ್ಲ. ಶಿವಸೇನೆಯೊಂದಿಗೆ ಮಾತುಕತೆ ನಡೆದಿದೆ. ಬೆಳಗಾವಿ ಮತ್ತು ಮರಾಠಿ ಸಮಸ್ಯೆಗಳನ್ನು ಹೊರತುಪಡಿಸಿ ಅವರೊಂದಿಗೆ ಒಪ್ಪಂದ ಮಾಡಿಕೊಂಡು ರಾಜ್ಯದಲ್ಲಿ 100 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತೇವೆ’ ಎಂದರು.

ರಾಜ್ಯದಲ್ಲಿ ಶಿವಸೇನೆ ಸ್ಥಾಪನೆಗೆ ಅವಕಾಶ ಕೊಡಲ್ಲ: ಪಾಟೀಲ
ಧಾರವಾಡ: ರಾಜ್ಯದಲ್ಲಿ ಶಿವಸೇನೆ ಪ್ರವೇಶಕ್ಕೆ ಸಿದ್ಧತೆ ನಡೆದಿದ್ದು, ಶಿವಸೇನೆ ಒಳ ನುಸುಳಲು ನಾವು ಬಿಡುವುದಿಲ್ಲ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಹೇಳಿದರು. ನಗರದಲ್ಲಿ ಗುರುವಾರ ಮಾತನಾಡಿ, ಶಿವಸೇನೆ ಮಾಡಿರುವ ಪ್ರತಿಯೊಂದು ಕನ್ನಡ ವಿರೋಧಿ  ಕೆಲಸವನ್ನು ರಾಜ್ಯದ ಜನತೆ ಗಮನಿಸಿದ್ದಾರೆ. ಅಲ್ಲದೆ ಅದೊಂದು ನಮ್ಮ ವಿರೋಧಿ ರಾಜ್ಯದ ಪ್ರಾದೇಶಿಕ ಪಕ್ಷವಾಗಿದೆ. ಕನ್ನಡ ನಾಡು-ನುಡಿ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಕರ್ನಾಟಕ ಸರಕಾರ ಎಂದಿಗೂ ಕನ್ನಡ ವಿರೋಧಿ  ಪಕ್ಷವನ್ನು ರಾಜ್ಯದಲ್ಲಿ ಸ್ಥಾಪಿಸಲು ಅವಕಾಶ ಕಲ್ಪಿಸುವುದಿಲ್ಲ ಎಂದರು.

ಕನ್ನಡಿಗರ ನಾಡು-ನುಡಿ-ಗಡಿ ವಿಷಯದಲ್ಲಿ ವಿನಾ ಕಾರಣ ಗದ್ದಲ ಎಬ್ಬಿಸುವ ಶೀವಸೇನೆಯನ್ನು ರಾಜ್ಯದಲ್ಲಿ ಸ್ಥಾಪಿಸಲು ರಾಜ್ಯ ಸರಕಾರ ಅವಕಾಶ ಮಾಡಿಕೊಡಬಾರದು.
●ಬಸವರಾಜ ಹೊರಟ್ಟಿ, ವಿಧಾನ ಪರಿಷತ್‌ ಸದಸ್ಯ

-ಉದಯವಾಣಿ

Comments are closed.