ಮನೋರಂಜನೆ

ನಿಶ್ಯಬ್ದದಲ್ಲಿದೆ ಶಬ್ದ ಆರ್ಭಟ: ನಿಶ್ಯಬ್ದ-2 ಚಿತ್ರ ವಿಮರ್ಶೆ

Pinterest LinkedIn Tumblr

*ಶರಣು ಹುಲ್ಲೂರು


ಕಲಾವಿದರು: ರೂಪ್‌ ಶೆಟ್ಟಿ, ಆರಾಧ್ಯ ಶೆಟ್ಟಿ, ಅವಿನಾಶ್‌, ಪೆಟ್ರೋಲ್‌ ಪ್ರಸನ್ನ
ನಿರ್ದೇಶಕ: ದೇವರಾಜ್‌ ಕುಮಾರ್‌
ಅವಧಿ2 hrs. 13 Min.

ಕನ್ನಡದಲ್ಲಿ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಮಾದರಿಯ ಚಿತ್ರಗಳು ಹೆಚ್ಚುತ್ತಿದೆ. ಅದಕ್ಕೆ ಹೊಸ ಸೇರ್ಪಡೆ ‘ನಿಶ್ಯಬ್ದ 2’ ಚಿತ್ರ. ದೇವರಾಜ್‌ ಕುಮಾರ್‌ ನಿರ್ದೇಶನದ ಈ ಚಿತ್ರದಲ್ಲಿ ಪ್ರಮುಖವಾಗಿ ನಾಲ್ಕು ಪಾತ್ರಗಳು ಬರುತ್ತವೆ. ಇವುಗಳ ಜತೆ ನಾಯಿ ಕೂಡ ಕತೆಗೆ ಸಾಥ್‌ ನೀಡಿರುವುದು ವಿಶೇಷ.

ಹಾರರ್‌ ಮತ್ತು ಸಸ್ಪೆನ್ಸ್‌ ಸಿನಿಮಾ ಅಂದಾಕ್ಷಣ ದೆವ್ವ ಭೂತಗಳ ಕಥೆಯನ್ನೇ ಹೇಳಿದ್ದನ್ನು ನೋಡಿದ್ದೇವೆ. ಬದಲಾವಣೆ ಅಂದರೆ, ಈ ಸಿನಿಮಾದಲ್ಲಿ ಯಾವುದೇ ಭೂತಗಳು ಕಾಣಿಸಿಕೊಳ್ಳುವುದಿಲ್ಲ. ಆದರೂ, ದುರ್ಬಲ ಹೃದಯದವರಿಗೆ ಭಯವಾಗುತ್ತದೆ. ಸಿನಿಮಾ ಮುಗಿಯುವ ತನಕ ದೃಶ್ಯಗಳು ಥ್ರಿಲ್‌ ನೀಡುತ್ತಲೇ ಸಾಗುತ್ತವೆ. ಇಡೀ ಸಿನಿಮಾ ಒಂದೇ ದಿನದಲ್ಲಿ ಮುಗಿಯುವುದರಿಂದ ಮತ್ತು ಬಹುತೇಕ ಕತೆಯು ಒಂದೇ ಮನೆಯಲ್ಲಿ ಸಾಗುವುದರಿಂದ ನೋಡುಗ ತಮ್ಮ ಮೆದುಳಿಗೆ ಹೆಚ್ಚು ಕೆಲಸ ಕೊಡಬೇಕಿಲ್ಲ. ಅಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ರಿಲೀಫ್‌ ನೀಡುತ್ತಾರೆ ನಿರ್ದೇಶಕರು.

ಕಥಾ ನಾಯಕ ರಾಕಿ (ರೂಪೇಶ್‌), ನಾಯಕಿ ಶ್ರದ್ಧಾ ( ಆರಾಧ್ಯ ಶೆಟ್ಟಿ) ಮತ್ತು ಈ ಜೋಡಿಯ ಸ್ನೇಹಿತನಾದ ಪೆಟ್ರೋಲ್‌ ( ಪೆಟ್ರೋಲ್‌ ಪ್ರಸನ್ನ) ವೃತ್ತಿಯಲ್ಲಿ ಕಳ್ಳರು. ತಮ್ಮ ವೈಯಕ್ತಿಕ ಸಮಸ್ಯೆಗಾಗಿ ಇವರು ಕಳ್ಳತನಕ್ಕೆ ಮುಂದಾಗುತ್ತಾರೆ. ಒಂಟಿ ಮನೆಯಲ್ಲಿ ವಾಸವಿರುವ ಮಾಜಿ ಮಿಲ್ಟ್ರಿ ಆಫೀಸರ್‌ ವಿಲಿಯಮ್ಸ್‌ (ಅವಿನಾಶ್‌) ಮನೆಯಲ್ಲಿ ಕೋಟಿ ಕೋಟಿ ಹಣವಿದೆ ಎಂದು ಗೊತ್ತಾಗಿ, ಮೂವರು ರಾತ್ರೋರಾತ್ರಿ ವಿಲಿಯಮ್ಸ್‌ ಮನೆಗೆ ನುಗ್ಗುತ್ತಾರೆ. ಈತ ಕುರುಡ. ಆದರೆ, ಗನ್‌ನಿಂದ ಹೊರಟ ಬುಲೆಟ್‌ ಯಾವತ್ತೂ ತಪ್ಪದ ಗುರಿಕಾರ. ಅಲ್ಲದೇ, ತನ್ನ ರಕ್ಷಣೆಗಾಗಿ ನಾಯಿಯೊಂದನ್ನು ಸಾಕಿರುತ್ತಾನೆ. ಆದರೂ, ಈ ಚಕ್ರವ್ಯೂಹವನ್ನು ಬೇಧಿಸಿಕೊಂಡು ಕಳ್ಳರು ಮನೆಗೆ ನುಗ್ಗುತ್ತಾರೆ. ತನ್ನ ಮನೆಗೆ ಕಳ್ಳರು ಬಂದಿದ್ದಾರೆಂದು ಗೊತ್ತಾಗಿ, ಅವರೊಂದಿಗೆ ವಿಲಿಯಮ್ಸ್‌ ಹೋರಾಟಕ್ಕೆ ಇಳಿಯುತ್ತಾನೆ. ಆ ಭದ್ರ ಕೋಟೆಯಿಂದ ಕಳ್ಳರು ತಪ್ಪಿಸಿಕೊಂಡು ಬರುತ್ತಾರಾ? ಅಥವಾ ಮಾಜಿ ಯೋಧನ ಗುಂಡಿಗೆ ಬಲಿಯಾಗುತ್ತಾರಾ? ಅನ್ನುವುದೇ ಸಿನಿಮಾ.

ನಿರ್ದೇಶಕರು ತಮ್ಮ ಚಿತ್ರಕ್ಕೆ ‘ನಿಶ್ಯಬ್ದ’ ಅಂತ ಹೆಸರಿಟ್ಟಿದ್ದರೂ, ಚಿತ್ರದ ತುಂಬಾ ಶಬ್ದದ್ದೆ ಸಂತೆ. ಸಿನಿಮಾದ ಶುರುವಿನಿಂದ ಕೊನೆಯ ತನಕ ಶಬ್ದ ಮತ್ತು ನಿಶ್ಯಬ್ದದ ಆಟ ನಡೆಯುತ್ತಲೇ ಸಾಗುವುದು ಚಿತ್ರಕಥೆಯಲ್ಲಿ ಗುರುತಿಸಬಹುದಾದ ಅಂಶ. ಕ್ಷಣ ಕ್ಷಣಕ್ಕೂ ರೋಚಕತೆ ಸೃಷ್ಟಿ ಮಾಡುವ ದೃಶ್ಯಗಳಿಂದಾಗಿ ಥ್ರಿಲ್ಲರ್‌ ಪ್ರಿಯರಿಗೆ ಈ ಚಿತ್ರ ಇಷ್ಟವಾಗುತ್ತದೆ. ಅದರಲ್ಲೂ ಅವಿನಾಶ್‌ ಮತ್ತು ರೂಪೇಶ್‌ ನಟನೆಯ ಜುಗಲ್ಬಂದಿ ಸಿನಿಮಾದ ಮತ್ತೊಂದು ಪ್ಲಸ್‌ ಪಾಯಿಂಟ್‌. ನಾಯಿ ಕೂಡ ನಟರಷ್ಟೇ ತನ್ನ ಸಾಮರ್ಥ್ಯ‌ ತೋರಿಸಿ ಅಚ್ಚರಿ ಮೂಡಿಸುತ್ತದೆ. ಕತೆಯ ಮುಂದುವರಿಕೆಗಾಗಿ ಶ್ರದ್ಧಾ ಮತ್ತು ಪೆಟ್ರೋಲ್‌ ಪಾತ್ರಗಳು ಸೃಷ್ಟಿಯಾದಂತಿವೆ. ಈ ಪಾತ್ರಗಳಿಗೆ ಮತ್ತಷ್ಟು ಗಟ್ಟಿ ಹಿನ್ನೆಲೆ ಬೇಕು ಅಂತ ಅನಿಸುತ್ತದೆ.

ಸಾಮಾನ್ಯವಾಗಿ ಹಾರರ್‌ ಮತ್ತು ಥ್ರಿಲ್ಲರ್‌ ಸಿನಿಮಾಗಳು ಅಂದಾಗ ಸಿನಿಮಾಟೋಗ್ರಫಿಯಷ್ಟೇ ಹಿನ್ನಲೆ ಸಂಗೀತಕ್ಕೂ ಮಹತ್ವ ನೀಡಲಾಗುತ್ತದೆ. ಈ ಸಿನಿಮಾದಲ್ಲಿ ಅಬ್ಬರದ ಸಂಗೀತದಲ್ಲಿ ನಿಶ್ಯಬ್ದತೆ ಕಳೆದು ಹೋಗಿದ್ದರಿಂದ, ಶಬ್ದಕ್ಕಷ್ಟೇ ಮಹತ್ವ ಸಿಕ್ಕಿದೆ. ರವೀಂದ್ರ ಮುದ್ದಿ ಸಾಹಿತ್ಯದಲ್ಲಿ ಮೂಡಿ ಬಂದ ಹಾಡುಗಳು ಕತೆಗೆ ಪೂರಕವಾಗಿವೆ. ಅಂದಹಾಗೆ ಇದು ಹೇಳಿ ಕೇಳಿ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಚಿತ್ರ. ಗಟ್ಟಿ ಗುಂಡಿಗೆ ಇರುವವರು ನಿಶ್ಯಬ್ಧದೊಳಗಿನ ಶಬ್ದವನ್ನು ಆಲಿಸಲು ಹೋಗಬಹುದು.

Comments are closed.