ಬೆಂಗಳೂರು/ ಚಿಕ್ಕಬಳ್ಳಾಪುರ: ಪತ್ನಿಯ ಅನೈತಿಕ ಸಂಬಂಧಕ್ಕೆ ಬೇಸತ್ತ ಪತಿರಾಯನೊಬ್ಬ ಮೂವರನ್ನು ಕೊಲೆ ಮಾಡಿರುವ ಶಂಕಿತ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆಂಚಾರ್ಲಹಳ್ಳಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಕದಿರೇಪಲ್ಲಿಯಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಅನೈತಿಕ ಸಂಬಂಧಕ್ಕೆ ಬಲಿಯಾದವರನ್ನು ಕದಿರೇಪಲ್ಲಿ ಕ್ರಾಸ್ನ ಪ್ರೇಮಾ (24) ಕೋಂ ವೆಂಕಟರೆಡ್ಡಿ ಹಾಗೂ ಪ್ರೇಮ ಪ್ರಿಯಕರನಾದ ರಾಯಪಲ್ಲಿ ನಿವಾಸಿ ಶ್ರೀನಾಥ ಹಾಗೂ ಆತನ ತಾಯಿ ಭಾಗ್ಯಮ್ಮ ಎಂದು ಗುರುತಿಸಲಾಗಿದೆ. ಆದರೆ, ಶ್ರೀನಾಥ್ ಕುರಿತು ಮಾಹಿತಿ ಇಲ್ಲ.
ಆದರೆ, ಪತ್ನಿ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿದ್ದರಿಂದ ಯಾರಿಗೂ ತಿಳಿಸದೆ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಆರೋಪಿ ವೆಂಕಟರೆಡ್ಡಿ ಹೇಳುತ್ತಿದ್ದಾನೆ. ಹೀಗಾಗಿ ಆರೋಪಿ ವಿಚಾರಣೆ ಮುಂದುವರಿದಿದೆ. ಪ್ರೇಮಾಳ ಅನೈತಿಕ ಸಂಬಂಧಕ್ಕೆ ಬೇಸತ್ತ ವೆಂಕಟರೆಡ್ಡಿ ಆಕೆಯನ್ನು ಕೊಂದು ಸುಟ್ಟು ಹಾಕಿದ್ದಾನೆ ಎನ್ನುತ್ತಿವೆ ಪೊಲೀಸ್ ಮೂಲಗಳು.
ಘಟನೆ ಹಿನ್ನಲೆ: ಪ್ರೇಮಾ ಎಂಬಾಕೆ ತನ್ನ ವಿವಾಹಕ್ಕೂ ಮೊದಲೇ ಚಿಂತಾಮಣಿ ಬುರುಡುಗುಂಟೆಯ ಆಸ್ಪತ್ರೆಯ ಗುಮಾಸ್ತನಾದ ರಾಯಪ್ಪಲ್ಲಿ ನಿವಾಸಿ ಶ್ರೀನಾಥ್ನ್ನು ಪ್ರೇಮಿಸುತ್ತಿದ್ದರು. ವಿಷಯ ತಿಳಿದ ಕುಟುಂಬಸ್ಥರು ಪ್ರೇಮಾಗೆ ಬೆಂಗಳೂರಿನ ಕಾಡುಗೋಡಿ ಸಂಬಂಧಿ ವೆಂಕಟರೆಡ್ಡಿ ಜೊತೆ ವಿವಾಹ ಮಾಡಿದರು.
ಮದುವೆಯಾದರೂ ಪ್ರೇಮಾ ತನ್ನ ಪ್ರಿಯಕರ ಶ್ರೀನಾಥನೊಂದಿಗೆ ಸಂಬಂಧ ಮುಂದುವರೆಸಿರುತ್ತಾಳೆ. ಪ್ರೇಮಾಳಿಗಾಗಿ ಶ್ರೀನಾಥ್ ಬೆಂಗಳೂರಿಗೆ ಬಂದು ಹೋಗುವುದು ಸಾಮಾನ್ಯವಾಗಿತ್ತು.ಇದರಿಂದ ಬೆಸತ್ತ ಪತಿ ವೆಂಕಟರೆಡ್ಡಿ ತನ್ನ ಹೆಂಡತಿಯನ್ನು ಹುಡುಕಿಕೊಂಡು ಒಂದು ದಿನ ಬುರುಡುಗುಂಟೆಗೆ ಬಂದಿದ್ದ ವೇಳೆ ಶ್ರೀನಾಥನ ಜೊತೆಗೆ ಆಸ್ಪತ್ರೆಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡಿದ್ದಾನೆ.
ಆಭರಣ ಸಮೇತ ಪ್ರೇಮಾ ನಾಪತ್ತೆ: ವಿಷಯ ತಿಳಿದ ಪ್ರೇಮಾ ಜು. 10 ರಂದು 2 ಲಕ್ಷ ರೂ, ನಗದು ಸೇರಿ ಮದುವೆಯ ಸಂದರ್ಭದಲ್ಲಿ ಪೋಷಕರು ಇಟ್ಟಿದ್ದ ಅಪಾರ ಚಿನ್ನಾಭರಣ ಸಮೇತ ಬೆಂಗಳೂರಿನಿಂದ ನಾಪತ್ತೆಯಾಗಿದ್ದಳು. ಈ ಬಗ್ಗೆ ಪತಿ ವೆಂಕಟರೆಡ್ಡಿ ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ.
ಈ ಬಗ್ಗೆ ತನಿಖೆಗೆ ಮುಂದಾದ ಪೊಲೀಸರು ಜು.17ರಂದು ನಾಪತ್ತೆಯಾಗಿದ್ದ ಪ್ರೇಮಾರನ್ನು ಪತ್ತೆ ಮಾಡಿ ಮತ್ತೆ ಪತಿಗೆ ವೆಂಕಟರೆಡ್ಡಿ ಒಪ್ಪಿಸಿದ್ದು, ಶ್ರೀನಾಥ್ ಮತ್ತು ಪ್ರೇಮಾ ಇಬ್ಬರಿಗೂ ಬುದ್ದಿವಾದ ಹೇಳಿದ್ದ. ಆದರೆ, ಇದಾದ ಮೂರು ದಿನಗಳ ಬಳಿಕ ಮತ್ತೂಮ್ಮೆ ಪ್ರೇಮಾ ನಾಪತ್ತೆಯಾಗಿದ್ದಳು. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ಇತ್ತ ಪ್ರಿಯಕರ ಶ್ರೀನಾಥ್ ಕೂಡ ಕಣ್ಮರೆಯಾಗಿದ್ದಾನೆ. ಈ ಬಗ್ಗೆ ಅನುಮಾನಗೊಂಡ ವೆಂಕಟರೆಡ್ಡಿ ಮನೆ ಮಾಲೀಕ ಏಕಾಏಕಿ ಪ್ರೇಮಾ ನಾಪತ್ತೆಯಾದ ಬಗ್ಗೆ ಮತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಆಗ ಪೊಲೀಸರು ವೆಂಕಟರೆಡ್ಡಿರನ್ನು ಕರೆಸಿ ವಿಚಾರಿಸಿದಾಗ ಘಟನೆ ಬೆಳಕಿಗಿ ಬಂದಿದೆ.
ಮೂವರ ಬಲಿ: ಪ್ರೇಮಾರನ್ನು ವೆಂಕಟರೆಡ್ಡಿಯೇ ಕೊಲೆ ಮಾಡಿದ್ದಾನಾ, ಅಥವಾ ಆಕೆಯೆ ಆತ್ಮಹತ್ಯೆ ಮಾಡಿಕೊಂಡಳಾ ಎಂಬುದು ಇನ್ನೂ ನಿಗೂಢವಾಗಿದೆ. ಕಾಡುಗೋಡಿ ಪೊಲೀಸರು ವೆಂಕಟರೆಡ್ಡಿರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದರ ನಡುವೆ ಮಗನ ಪ್ರೇಮ ಪುರಾಣ ಬೆಳಕಿಗೆ ಬರುತ್ತಿದ್ದಂತೆ ಶ್ರೀನಾಥನ ತಾಯಿ ಭಾಗ್ಯಮ್ಮ ಸಹ ರಹಸ್ಯವಾಗಿ ಮೃತ ಪಟ್ಟಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಆದರೆ, ಪೊಲೀಸ್ ಮೂಲಗಳ ಪ್ರಕಾರ ವೆಂಕಟರೆಡ್ಡಿಯೇ ವಿಷವುಣಿಸಿ ಭಾಗ್ಯಮ್ಮಳನ್ನು ಕೊಲೆಗೈದಿದ್ದಾನೆ ಎನ್ನಲಾಗಿದೆ. ಇನ್ನೂ ಪ್ರೇಮಾ ಪ್ರಿಯಕರ ಶ್ರೀನಾಥ ಸಹ ಕಳೆದ ಮಾ. 20ಕ್ಕೆ ಆಸ್ಪತ್ರೆಯ ಕೆಲಸಕ್ಕೆ ಹೋದವನು ತಿರುಗಿ ಕೆಲಸಕ್ಕೆ ಬಂದಿಲ್ಲ. ಎಲ್ಲಿದ್ದಾನೆ ಎಂಬುದೂ ತಿಳಿದು ಬಂದಿಲ್ಲ. ಕಾಡುಗೋಡಿ ಹಾಗೂ ಚಿಂತಾಮಣಿ ಪೊಲೀಸರ ತನಿಖೆಯಿಂದ ಮಾತ್ರ ಎಲ್ಲವು ಬೆಳಕಿಗೆ ಬರಬೇಕಿದೆ.
ಮರಣೋತ್ತರ ಪರೀಕ್ಷೆಗೆ ಹೆದರಿ ಅಂತ್ಯಕ್ರಿಯೆ: ವೆಂಕಟರೆಡ್ಡಿ ತನ್ನ ಸಹೋದರಿಯ ಮಗಳು ಪ್ರೇಮಾಳನ್ನೇ ವಿವಾಹವಾಗಿದ್ದಾನೆ. ಹೀಗಾಗಿ ಪ್ರೇಮಾ ಕುಟುಂಬಸ್ಥರಿಂದ ಯಾವುದೇ ದೂರು ದಾಖಲಾಗಿಲ್ಲ. ಅಲ್ಲದೇ ಆರೋಪಿ ವೆಂಕಟರೆಡ್ಡಿ ವಿಚಾರಣೆ ವೇಳೆ ಪತ್ನಿ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪೊಲೀಸರಿಗೆ ಮಾಹಿತಿ ನೀಡಿದರೆ, ಮರಣೋತ್ತರ ಪರೀಕ್ಷೆ ಮಾಡಿ ದೇಹವನ್ನು ಬೇರ್ಪಡಿಸುತ್ತಾರೆ ಎಂಬ ಭಾವನೆಯಿಂದ ಹೇಳಲಿಲ್ಲ. ಹೀಗಾಗಿ ಅಂತ್ಯಕ್ರಿಯೆ ಮಾಡಲಾಯಿತು. ಆದರೆ, ಕೊಲೆಗೈದಿಲ್ಲ ಎನ್ನುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪತಿ ವೆಂಕಟರೆಡ್ಡಿ ವಿಚಾರಣೆ ವೇಳೆ ಪತ್ನಿ ಪ್ರೇಮಾ ಆತ್ಮಹತ್ಯೆ ಮಾಡಿಕೊಂಡಿದ್ದಳು ಎನ್ನುತ್ತಿದ್ದಾನೆ. ಹೀಗಾಗಿ ವಿಚಾರಣೆ ಮುಂದುವರಿಸಲಾಗಿದೆ. ಆದರೆ, ಮರ್ಯಾದೆ ಹತ್ಯೆಯಾದ ಬಗ್ಗೆ ಇನ್ನು ಖಚಿತವಾಗಿಲ್ಲ.
-ಅಬ್ದುಲ್ ಅಹ್ಮದ್, ವೈಟ್ಫೀಲ್ಡ್ ಡಿಸಿಪಿ
-ಉದಯವಾಣಿ
Comments are closed.