(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಸತತ ಪರಿಶ್ರಮ, ವೈಯಕ್ತಿಕ ಬದ್ಧತೆ, ಸಂಘಟಿತ ಪ್ರಯತ್ನಗಳು ಒಬ್ಬ ವ್ಯಕ್ತಿಯಲ್ಲಿ ನಾಯಕತ್ವದ ಗುಣವನ್ನು ಹುಟ್ಟುಹಾಕುತ್ತದೆ. ಸುಂದರವಾದ ಜಗತ್ತು ಪ್ರಾಕೃತಿಕ ಸೃಷ್ಟಿಯಾಗಿದ್ದು ಪ್ರಕೃತಿಯ ರಕ್ಷಣೆ ಹಾಗೂ ಸ್ವಚ್ಚತೆಯ ಅರಿವು ಹಾಗೂ ಜವಬ್ದಾರಿ ಪ್ರತಿಯೊಬ್ಬರಲ್ಲೂ ಇರಬೇಕು. ಭವಿಷ್ಯದ ನಾಯಕರಾದ ವಿದ್ಯಾರ್ಥಿಗಳಿಂದಲೇ ಸ್ವಚ್ಚತೆಯ ಬಗೆಗಿನ ಕಾಳಜಿ ಹುಟ್ಟುಹಾಕುವ ನಿಟ್ಟಿನಲ್ಲಿ ಬ್ಯಾರೀಸ್ ಸಂಸ್ಥೆ ಈ ಕಾರ್ಯಕ್ರಮ ಆಯೋಜಿಸುತ್ತಿದೆ ಎಂದು ಹಾಜಿ ಕೆ.ಮೊಯ್ದಿನ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್ನ ಸಂಚಾಲಕರಾದ ಸಯ್ಯದ್ ಮೊಹಮ್ಮದ್ ಬ್ಯಾರಿ ಹೇಳಿದರು.

ತಾಲೂಕಿನ ಕೋಡಿಯ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಯೋಜನೆಯಲ್ಲಿ ಏ.5 ರವಿವಾರ ಜರುಗಿದ 45ನೇ ‘ಸ್ವಚ್ಛ ಕಡಲ ತೀರ-ಹಸಿರು ಕೋಡಿ ಅಭಿಯಾನ’ ಉದ್ದೇಶಿಸಿ ಅವರು ಮಾತನಾಡಿದರು.
ರೆಡ್ ಕ್ರಾಸ್ ಸಂಸ್ಥೆಯ ಜಯಕರ್ ಶೆಟ್ಟಿ ಮಾತನಾಡಿ, ನಿತ್ಯ ಜೀವನದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆಗೊಳಿಸಿ ಭೂಮಿಯ ರಕ್ಷಣೆಯನ್ನು ಮಾಡಬೇಕು. ಶಿಕ್ಷಣದೊಂದಿಗೆ ಪರಿಸರ ಕಾಳಜಿ ವಿದ್ಯಾರ್ಥಿಗಳಲ್ಲಿ ಮೂಡಬೇಕು. ಬ್ಯಾರೀಸ್ ಸಂಸ್ಥೆ ನಡೆಸುತ್ತಿರುವ ಸ್ವಚ್ಛತಾ ಅಭಿಯಾನವು ನಿರಂತರವಾಗಿ ಮುಂದುವರೆಯಲಿ ಎಂದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಬ್ಯಾರಿ ಮಾತನಾಡಿದರು.
ಬ್ಯಾರೀಸ್ ಗ್ರೂಫ್ ಆಫ್ ಇನ್ಸಿಟ್ಯೂಟ್ನ ಟ್ರಸ್ಟಿಗಳಾದ ಅಶ್ರಫ್ ಬ್ಯಾರಿ, ಸಿದ್ಧಿಖ್ ಬ್ಯಾರಿ, ಡಾ.ಆಸೀಫ್ ಬ್ಯಾರಿ, ನಿರ್ದೇಶಕಿ ಹಾಗೂ ಬ್ಯಾರೀಸ್ ಪಿಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ, ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಬ್ಯಾರೀಸ್ ಡಿ.ಎಡ್, ಬಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಡಾ.ಫಿರ್ದೋಸ್, ಬ್ಯಾರೀಸ್ ಪ್ರೌಢಶಾಲೆಯ ಮುಖ್ಯೋಪಧ್ಯಾಯ ಡಾ. ಜಯಶೀಲ ಶೆಟ್ಟಿ, ಬ್ಯಾರೀಸ್ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯ ಜಟ್ಟಪ್ಪ ಮೊದಲಾದವರಿದ್ದರು.
ಉಪನ್ಯಾಸಕರಾದ ಲಮೀಸ್ ಹಾಗೂ ಐಶ್ವರ್ಯ ಕಾರ್ಯಕ್ರಮ ನಿರೂಪಿಸಿದರು.
ಕಡಲ ತೀರ ಸ್ವಚ್ಚತೆ: ಕೋಟೇಶ್ವರದ ಹಳೆಅಳಿವೆಯಿಂದ ಕೋಡಿ ಸಮುದ್ರ ಕಿನಾರೆಯವರೆಗೆ ಸ್ವಚ್ಚತಾ ಕಾರ್ಯ ನಡೆಯಿತು. ಅರಣ್ಯ ಇಲಾಖೆ ಅಧಿಕಾರಿ-ಸಿಬ್ಬಂದಿಗಳು, ಕರಾವಳಿ ಕಾವಲು ಪಡೆ ಪೊಲೀಸರು, ಕುಂದಾಪುರ ಪುರಸಭೆಯ ಮಾಜಿ ಸದಸ್ಯರುಗಳು, ರೆಡ್ಕ್ರಾಸ್ ಸಂಸ್ಥೆ, ರೋಟರಿ ಕ್ಲಬ್, ಲಯನ್ಸ್ ಕ್ಲಬ್, ರಿಫ್ ವಾಚ್, ಎಫ್.ಎಸ್.ಎಲ್., ಸ್ವಯಂ ಸೇವಾ ಸಂಸ್ಥೆಗಳು, ಬ್ಯಾರೀಸ್ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿ ಮತ್ತು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಬೋಧಕೇತರ ಸಿಬ್ಬಂದಿಗಳು, ಪೋಷಕರು, ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Comments are closed.