ಕರ್ನಾಟಕ

ಸೆಕ್ಯೂರಿಟಿ ಗಾರ್ಡ್‌ನ್ನು ಕಟ್ಟಿ ಹಾಕಿ ರೂ. 21 ಲಕ್ಷ ಎಟಿಎಂ ಹಣ ಲೂಟಿ

Pinterest LinkedIn Tumblr


ತುಮಕೂರು, ಜ. ೨೪- ಬ್ಯಾಂಕ್‌ವೊಂದರ ಎಟಿಎಂ ಕೇಂದ್ರಕ್ಕೆ ನುಗ್ಗಿರುವ ಶಸ್ತ್ರಸಜ್ಜಿತ ನಾಲ್ಕು ಮಂದಿ ಮುಸುಕುಧಾರಿ ದುಷ್ಕರ್ಮಿಗಳು ಸೆಕ್ಯೂರಿಟಿ ಗಾರ್ಡ್‌ನ್ನು ಕಟ್ಟಿಹಾಕಿ ಎಟಿಎಂನಲ್ಲಿದ ಹಣದ ಬಾಕ್ಸ್ ಒಡೆದು ಸುಮಾರು 21 ಲಕ್ಷಕ್ಕೂ ಅಧಿಕ ನಗದನ್ನು ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಗರದ ಗುಬ್ಬಿ ಗೇಟ್ ಬಳಿ ಮಧ್ಯರಾತ್ರಿ ನಡೆದಿದೆ.

ಇಲ್ಲಿನ ಗುಬ್ಬಿಗೇಟ್‌ನ ಬೈಪಾಸ್ ಬಳಿ ಬಿ.ಹೆಚ್.ರಸ್ತೆಯಲ್ಲಿರುವ ಕರ್ನಾಟಕ ಬ್ಯಾಂಕ್‌ನ ಎಟಿಎಂ ಕೇಂದ್ರಕ್ಕೆ ರಾತ್ರಿ 3 ಗಂಟೆಯಲ್ಲಿ ಶಸ್ತ್ರಸಜ್ಜಿತ ಮುಸುಕುಧಾರಿ ದರೋಡೆಕೋರರ ಪೈಕಿ ಇಬ್ಬರು ನುಗ್ಗಿ ಎಟಿಎಂ ಕೇಂದ್ರದಲ್ಲಿ ಭದ್ರತಾ ಸಿಬ್ಬಂದಿ ಗಂಗಣ್ಣನನ್ನು ಬೆದರಿಸಿ ಕಟ್ಟಿಹಾಕಿ ಎಟಿಎಂ ಯಂತ್ರದ ಸಿಕ್ರೇಟ್ ಲಾಕ್‌ನಿಂದ ಹಣದ ಬಾಕ್ಸ್‌‌ನ್ನು ತೆಗೆದು ಅದರಲ್ಲಿದ್ದ 2 ಸಾವಿರ ಮುಖಬೆಲೆಯ 11 ಲಕ್ಷ 16 ಸಾವಿರ, 100 ಮುಖ ಬೆಲೆಯ 2 ಲಕ್ಷ 82 ಸಾವಿರದ ಮುನ್ನೂರು ಹಾಗೂ 500 ಮುಖ ಬೆಲೆಯ 7 ಲಕ್ಷ0 70 ಸಾವಿರ ರೂ. ನಗದನ್ನು ದೋಚಿಕೊಂಡು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆನ್ನಲಾಗಿದೆ.

ನಗರಠಾಣೆ ಪಿಎಸ್ಐ ಉಮಾಶಂಕರ್ ಮತ್ತು ಸಿಬ್ಬಂದಿ ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್, ಅಡಿಷನಲ್ ಎಸ್ಪಿ ಜಿ.ಬಿ. ಮಂಜುನಾಥ್, ಡಿವೈಎಸ್ಪಿ ಚಿದಾನಂದಸ್ವಾಮಿ, ನಗರ ಸರ್ಕಲ್ ಇನ್ಸ್‌ಪೆಕ್ಟರ್ ಗಂಗಲಿಂಗಯ್ಯ, ತಿಲಕ್‌ಪಾರ್ಕ್ ಸರ್ಕಲ್ ಇನ್ಸ್‌ಪೆಕ್ಟರ್ ರಾಘವೇಂದ್ರ ಮತ್ತವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸಹ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ತುಮಕೂರು ತಾಲ್ಲೂಕಿನ ಮಲ್ಲಪ್ಪನಪಾಳ್ಯ ವಾಸಿ ಗಂಗಣ್ಣ ಭದ್ರತಾ ಸಿಬ್ಬಂದಿಯಾಗಿ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 3 ಗಂಟೆ ಸುಮಾರಿಗೆ ಡಕಾಯಿತರು ಬಂದು ನನ್ನನ್ನು ಕಟ್ಟಿ ಹಾಕಿ ಈ ಕೃತ್ಯವೆಸಗಿದ್ದಾರೆಂದು ಪೊಲೀಸರಿಗೆ ತಿಳಿಸಿದ್ದಾನೆ. ಆದರೆ ಪೊಲೀಸರ ಪ್ರಕಾರ ನಿನ್ನೆ ಸಂಜೆ 4 ಗಂಟೆಯಲ್ಲಿ ಎಟಿಎಂ ಕೇಂದ್ರಕ್ಕೆ ಗನ್‌ಮನ್ ಹಾಗೂ ಕಂಪೆನಿ ವ್ಯವಸ್ಥಾಪಕ ಸೇರಿದಂತೆ ನಾಲ್ಕು ಮಂದಿ ಬಂದು ಎಟಿಎಂಗೆ ಹಣ ತುಂಬಿದ್ದ ವ್ಯಕ್ತಿಗಳೇ ನಕಲಿ ಕೀ ಬಳಸಿ ಭದ್ರತಾ ಸಿಬ್ಬಂದಿಯನ್ನು ಬಳಸಿಕೊಂಡು ಎಟಿಎಂ ಕೇಂದ್ರದ ಬಾಗಿಲು ತೆರೆದು ಸಿಕ್ರೇಟ್ ಲಾಕ್‌ನಿಂದ ಎಟಿಎಂ ಯಂತ್ರವನ್ನು ತೆರೆದು ಈ ಕೃತ್ಯವೆಸಗಿರುವ ಶಂಕೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಎಟಿಎಂ ಕೇಂದ್ರದ ಒಳಗೆ ಮತ್ತು ಹೊರಗಡೆ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಎಸ್ಪಿ ಇಶಾಪಂತ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ದರೋಡೆ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ಲಭ್ಯವಾಗಿದ್ದು, ಡಕಾಯಿತರನ್ನು ಶೀಘ್ರವಾಗಿ ಪತ್ತೆಹಚ್ಚುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾಪಂತ್ ಇಂದಿಲ್ಲಿ  ತಿಳಿಸಿದರು.

ನಾಲ್ವರು ಪೊಲೀಸರ ವಶಕ್ಕೆ

ಸೆಕ್ಯೂರಿಟಿ ಗಾರ್ಡ್‌ಗಳಾದ ರವೀಶ್, ಗಂಗಣ್ಣ ಮತ್ತು ಎಟಿಎಂ ಕೇಂದ್ರಕ್ಕೆ ಹಣ ತುಂಬಲು ಬಂದಿದ್ದ ಮಹೇಶ್, ಅಶ್ವತ್ಥ ಎಂಬುವರನ್ನು ಈಗಾಗಲೇ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡು ಪ್ರಮುಖ ವ್ಯಕ್ತಿಯೊಬ್ಬರ ಶೋಧನಾ ಕಾರ್ಯದಲ್ಲಿ ತೊಡಗಿದ್ದಾರೆ. ಈ ಪ್ರಕರಣದ ಬಗ್ಗೆ ಸಿಸಿ ಕ್ಯಾಮೆರಾ ದೃಶ್ಯಾವಳಿಯಿಂದ ಸಾಕಷ್ಟು ಮಾಹಿತಿ ಲಭ್ಯವಾಗಿದ್ದು, ಶೀಘ್ರವೇ ಆರೋಪಿಗಳನ್ನು ಪತ್ತೆಹಚ್ಚಿ ಈ ಪ್ರಕರಣಕ್ಕೆ ಇತಿಶ್ರೀ ಹಾಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Comments are closed.