ಧಾರವಾಡ: ಧಾರವಾಡ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡ ಬರ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವ ಕಾಂಗ್ರೆಸ್ ಮುಖಂಡ ಬಸವರಾಜ್ ಮುತ್ತಗಿ ಸೇರಿದಂತೆ ಐದು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.
ಶುಕ್ರವಾರ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಸುದ್ದಿಗೋಷ್ಠಿ ನಡೆಸಿ ಕೊಲೆ ಪ್ರಕರಣದ ತನಿಖೆಯ ಮಾಹಿತಿ ನೀಡಿದರು.
ಬೆಳ್ಳಿಗಟ್ಟಿ ಗ್ರಾಮದ ಬಳಿ ನಾಗೇಶ್ ಎಂಬವರಿಗೆ ಸೇರಿದ 40 ಎಕರೆ ಜಮೀನಿನಲ್ಲಿ, 9ಎಕರೆ ಜಮೀನನ್ನು ಯೋಗೀಶ್ ಗೌಡ ಖರೀದಿಸಿದ್ದರು. ಬಳಿಕ 15 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಜಮೀನು ಖರೀದಿ ವಿಷಯದಲ್ಲಿ ಯೋಗೀಶ್ ಗೌಡ ಹಾಗೂ ಮುತ್ತಗಿಗೆ ವಿವಾದ ನಡೆದಿತ್ತು.
ಈ ಹಿನ್ನೆಲೆಯಲ್ಲಿ ಜೂನ್ 15ರಂದು ಧಾರವಾಡದ ಸಪ್ತಾಪುರ ಬಡಾವಣೆಯಲ್ಲಿರುವ ಉದಯ್ ಜಿಮ್ ನಲ್ಲೇ ಯೋಗೀಶ್ ಗೌಡ ಅವರನ್ನು ಐವರು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿರುವುದಾಗಿ ವಿವರಣೆ ನೀಡಿದ್ದಾರೆ. ಆರೋಪಿಗಳು ಕೊಲೆಗೆ ಬಳಸಿದ ತಲವಾರ್, ರಾಡ್, ಮಚ್ಚುಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಯೋಗೀಶ್ ಗೌಡ ಹತ್ಯೆಯ ಆರೋಪಿಗಳಾದ ಬಸವರಾಜ್ ಮುತ್ತಗಿ(37ವರ್ಷ), ವಿಕ್ರಮ್ ಬಳ್ಳಾರಿ (26), ವಿನಾಯಕ ಕಟಗಿ(34) ಕೀರ್ತಿಕುಮಾರ್ ಕುರಹಟ್ಟಿ(25),ಸಂದೀಪ್ ಸವದತ್ತಿ(28)ಯನ್ನು ಬಂಧಿಸಲಾಗಿದೆ.
-ಉದಯವಾಣಿ
Comments are closed.