ಕರ್ನಾಟಕ

ಕೊರಿಯರ್ ಹುಡುಗರ ಬೆದರಿಸಿ ಸುಲಿಗೆ

Pinterest LinkedIn Tumblr

Crime-2ಬೆಂಗಳೂರು, ಜೂ.೯-ಮನೆಗೆ ಹೋಗುತ್ತಿದ್ದ ಕೊರಿಯರ್ ಯುವಕರನ್ನು ಬೆದರಿಸಿ ಪಲ್ಸರ್ ಬೈಕ್, ಚಿನ್ನದ ಚೈನ್, ಮೊಬೈಲ್‌ಗಳನ್ನು ನಾಲ್ವರು ದುಷ್ಕರ್ಮಿಗಳು ಕಸಿದು ಪರಾರಿಯಾಗಿರುವ ದುರ್ಘಟನೆ ನಂದಿನಿಲೇಔಟ್‌ನ ಕಾನ್ಸರ್ ಆಸ್ಪತ್ರೆಯ ಬಳಿ ನಿನ್ನೆ ರಾತ್ರಿ ನಡೆದಿದೆ.
ಕೊರಿಯರ್ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರದೀಪನ್ ಹಾಗೂ ದೀಪಕ್ ಅವರು ರಾತ್ರಿ ೧೧.೫೦ರ ವೇಳೆ ಕೆಲಸ ಮುಗಿಸಿಕೊಂಡು ಕಾನ್ಸರ್ ಆಸ್ಪತ್ರೆಯ ಬಳಿ ಹೋಗುತ್ತಿದ್ದಾಗ ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅಡ್ಡಗಟ್ಟಿ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ ೧೦ ಗ್ರಾಂ ತೂಕದ ಚಿನ್ನದ ಸರ, ೨ ಮೊಬೈಲ್‌ಗಳು ಹಾಗೂ ಪಲ್ಸರ್ ಬೈಕ್ ಕಸಿದುಕೊಂಡು ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ನಂದಿನಿಲೇಔಟ್ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಡಿಸಿಪಿ ಸುರೇಶ್ ಅವರು ತಿಳಿಸಿದ್ದಾರೆ.
ಕಿಟಕಿ ಕಳವು
ಸಾಫ್ಟ್‌ವೇರ್ ಇಂಜಿನಿಯರೊಬ್ಬರ ಮನೆಯ ಕಿಟಕಿಯಿಂದ ಕೈ ಹಾಕಿರುವ ದುಷ್ಕರ್ಮಿಗಳು ಚಿನ್ನದ ಸರ, ಮೊಬೈಲ್ ದೋಚಿ ಪರಾರಿಯಾಗಿರುವ ದುರ್ಘಟನೆ ಗಿರಿನಗರದ ಸಪ್ತಗಿರಿ ಲೇಔಟ್‌ನಲ್ಲಿ ಇಂದು ನಸುಕಿನಲ್ಲಿ ನಡೆದಿದೆ.
ಸಪ್ತಗಿರಿ ಲೇಔಟ್‌ನ ಖಾಸಗಿ ಕಂಪನಿಯ ಸಾಫ್ಟ್‌ವೇರ್ ಇಂಜಿನಿಯರ್ ಸಂತೋಷ್ ಅವರು ಕಿಟಕಿ ತೆಗೆದು ಮಲಗಿದ್ದರು. ಮುಂಜಾನೆ ೪ರ ವೇಳೆ ಬಂದಿರುವ ದುಷ್ಕರ್ಮಿಗಳು ಕಿಟಕಿಯಲ್ಲಿ ಕೈ ಹಾಕಿ ಪಕ್ಕದ ಟೇಬಲ್ ಮೇಲೆ ಬಿಚ್ಚಿಟ್ಟಿದ್ದ ೮೦ ಗ್ರಾಂ ತೂಕದ ಚಿನ್ನದ ರಸ, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಗಿರಿನಗರ ಪೊಲೀಸರು ದುಷ್ಕರ್ಮಿಗಳ ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದಾರೆ.

Comments are closed.