ಬೆಂಗಳೂರು: ರಾಜ್ಯದಲ್ಲಿ ಬರ ಎದುರಾಗಿದ್ದರೂ ನಾನು ಬರ ಪ್ರವಾಸ ಮಾಡಿಲ್ಲವೆಂಬ ಟೀಕೆಗಳು ಕೇಳಿಬರುತ್ತಿದೆ. ಒಂದು ಕಾಲದಲ್ಲಿ ನಾನು ಪರಿಹಾರಕ್ಕೆ ಹೋದರೆ 50 ಸಾವಿರದಿಂದ ಲಕ್ಷ ರು.ವರೆಗೆ ನೆರವು ನೀಡಿದ್ದೇನೆ. ಆದರೆ ಸದ್ಯ ನಾನು ಬರಿ ಗೈ ದಾಸಯ್ಯನಾಗಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯ ಸರಕಾರದ ಮೂರು ವರ್ಷಗಳ ಸಾಧನೆ ಏನೇಂಬುದ್ದನ್ನು ಸಿಎಂ ಸಿದ್ದರಾಮಯ್ಯ ಒಬ್ಬರೇ ಕುಳಿತು ಅಲೋಚಿಸಲಿ ಎಂದರು. ಬಿಡಿಎಯನ್ನು ಚಂದಾ ವಸೂಲಿ ಏಜೆಂಟ್ ನಂತೆ ಇಟ್ಟುಕೊಳ್ಳಬೇಡಿ. ಬಿಡಿಎಯಿಂದ ಕೇರಳ ಚುನಾವಣೆಗೆ ಎಷ್ಟು ದುಡ್ಡು ಹೋಗಿದೆ ಎನ್ನುವುದು ತಿಳಿದಿದೆ ಎಂದು ವ್ಯಂಗ್ಯವಾಡಿದರು.
ರಾಜ್ಯ ಸರಕಾರದ ಸಾಧನೆ ಬಗ್ಗೆ ನಾನೇನು ವ್ಯಾಲುವೇಷನ್ ಮಾಡುವುದಿಲ್ಲ. ಆ ಕೆಲಸ ಜನರೇ ಮಾಡುತ್ತಾರೆ. ಜಕ್ಕೂರು ಅರಣ್ಯ ಭಾಗದಲ್ಲಿ ಐದು ಎಕರೆ ಜಮೀನಿನಲ್ಲಿ ಮನೆ ಕಟ್ಟಿರುವ ಸಚಿವ ಆರ್.ವಿ.ದೇಶಪಾಂಡೆಯಂತಹವರ ರಕ್ಷಣೆಗೆ ಸರಕಾರ ನಿಂತಿದೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಪಟ್ಟ 40ಕ್ಕೂ ಹೆಚ್ಚು ಕಡತಗಳು ನಾಪತ್ತೆಯಾಗಿವೆ. ಅಂದರೇ ಇದು ಸರಕಾರ ಮೂರು ವರ್ಷದಲ್ಲಿ ಬಹುದೊಡ್ಡ ಸಾಧನೆಯಲ್ಲವೇ..? ಈ ಹಿಂದೆ ಬಿಜೆಪಿ ಸರಕಾರವು ಭ್ರಷ್ಟಾಚಾರವನ್ನು ರಾಜ್ಯದಲ್ಲಿ ಬಿತ್ತಿದ್ದು, ಕಾಂಗ್ರೆಸ್ ಸರಕಾರ ಅದಕ್ಕೆ ನೀರು, ಗೊಬ್ಬರ ಹಾಕಿ ಬೆಳೆಸಿದೆ ಎಂದು ಹೆಚ್ಡಿಕೆ ವಾಗ್ದಾಳಿ ನಡೆಸಿದರು.
ನನ್ನ ಮಗ ನಿಖಿಲ್ ಗೌಡ ನಾಯಕತ್ವದಲ್ಲಿ ‘ಜಾಗ್ವಾರ್’ ಸಿನಿಮಾ ಮಾಡುತ್ತಿದ್ದೇನೆ. ದೊಡ್ಡ ಬಜೆಟ್ ಸಿನಿಮಾಗೆ ದುಡ್ಡು ಎಲ್ಲಿಂದ ಬಂತು ಎಂದು ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಆರೋಪ ಮಾಡುತ್ತಿದೆ. ಅದರೆ ಸಿನಿಮಾದ ಸಂಪೂರ್ಣ ಖರ್ಚು ಬ್ಯಾಂಕ್ಗಳಿಂದ ಪಡೆದ ಸಾಲವಾಗಿದೆ. ಮಗನಿಗೆ ಒಬ್ಬ ತಂದೆಯಾಗಿ ದಾರಿ ತೋರಿಸಬೇಕಾಗಿದ್ದು ಹಾಗೂ ಜೀವನ ರೂಪಿಸಬೇಕಾದದ್ದು ನನ್ನ ಕರ್ತವ್ಯ ಅದನ್ನು ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.