ನವದೆಹಲಿ(ಪಿಟಿಐ): ರಾಜ್ಯಸಭೆಯ ದ್ವೈವಾರ್ಷಿಕ ಚುನಾವಣೆ ಜೂನ್ 11ಕ್ಕೆ ನಿಗದಿಯಾಗಿದೆ. ರಾಜ್ಯದಲ್ಲಿ ತೆರವಾಗಿರುವ ಉದ್ಯಮಿ ವಿಜಯ್ ಮಲ್ಯ ಅವರಿದ್ದ ಸ್ಥಾನ ಸೇರಿದಂತೆ ವಿವಿಧ ರಾಜ್ಯಗಳ 57 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ಗುರುವಾರ ತಿಳಿಸಿದೆ.
ಜೂನ್ ಹಾಗೂ ಆಗಸ್ಟ್ನಲ್ಲಿ 15 ರಾಜ್ಯಗಳ 55 ಸಂಸದರು ನಿವೃತ್ತರಾಗಲಿದ್ದು, ಈ ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ. ರಾಜಸ್ತಾನದಲ್ಲಿ ಆನಂದ ಶರ್ಮ(ಕಾಂಗ್ರೆಸ್) ಅವರ ಸ್ಥಾನ ಹಾಗೂ ರಾಜ್ಯದಲ್ಲಿ ವಿಜಯ್ ಮಲ್ಯ(ಪಕ್ಷೇತರ) ಅವರ ಸ್ಥಾನಗಳು ತೆರವಾಗಿದ್ದು ಒಟ್ಟು 57 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಮೇ 24 ಆಯೋಗ ಚುನಾವಣೆ ಅಧಿಸೂಚನೆ ಹೊರಡಿಸಲಿದೆ.
ಒಟ್ಟು 57 ಸ್ಥಾನಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ನ ತಲಾ 14 ಸ್ಥಾನಗಳಿವೆ. ಬಿಎಸ್ಪಿಯ 6 ಸ್ಥಾನ, ಜೆಡಿಯು 5, ಎಸ್ಪಿ, ಬಿಜೆಡಿ ಮತ್ತು ಎಐಎಡಿಎಂಕೆಯ ತಲಾ 3 ಸ್ಥಾನ, ಡಿಎಂಕೆ, ಎನ್ಸಿಪಿ ಮತ್ತು ಟಿಡಿಪಿ ತಲಾ 2 ಸ್ತಾನ, ಶಿವ ಸೇನಾದ ಒಂದು, ಹಾಗೂ ಮೇ 5ರಂದು ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪಕ್ಷೇತರ ಅಭ್ಯರ್ಥಿ ವಿಜಯಲ್ ಮಲ್ಯ ಅವರ ಒಂದು ಸ್ಥಾನ.
ಉತ್ತರ ಪ್ರದೇಶದ ಅತಿ ಹೆಚ್ಚು 11 ಸ್ಥಾನಗಳು, ತಮಿಳು ನಾಡು ಹಾಗೂ ಮಹಾರಾಷ್ಟ್ರದ ತಲಾ 6 ಸ್ಥಾನಗಳು, ಬಿಹಾರ 5 ಸ್ಥಾನ, ಆಂಧ್ರ ಪ್ರದೇಶ ಹಾಗೂ ಕರ್ನಾಟಕ ತಲಾ 4 ಸ್ತಾನ, ಮಧ್ಯ ಪ್ರದೇಶ ಮತ್ತು ಒಡಿಶಾ ತಲಾ ಮೂರು, ಹರಿಯಾಣ, ಜಾರ್ಖಂಡ, ಪಂಜಾಬ್, ಛತ್ತೀಸಗಡ, ತೆಲಂಗಾಣ ತಲಾ ಎರಡು ಸ್ಥಾನ, ಉತ್ತರಾಖಂಡ ಒಂದು ಸ್ಥಾನ ತೆರವಾಗಲಿದ್ದು, ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ನಿವೃತ್ತರಲ್ಲಿ ಪ್ರಮುಖರಾದ ಕೇಂದ್ರ ಸಚಿವ ಎಂ. ವೆಂಕಯ್ಯ ನಾಯ್ಡು, ಬೀರೇಂದ್ರ ಸಿಂಗ್, ಸುರೇಶ್ ಪ್ರಭು, ನಿರ್ಮಲಾ ಸೀತಾರಾಮ್, ಪಿಯೂಷ್ ಗೋಯಲ್ ಮತ್ತು ಮುಕ್ತಾರ್ ಅಬ್ಬಾಸ್ ನಖ್ವಿ, ಮಾಜಿ ಸಚಿವ ಜಯರಾಮ್ ರಮೇಶ್, ಜೆಡಿಯು ನಾಯಕ ಶರದ್ ಯಾದವ್, ಹಿರಿಯ ವಕೀಲ ರಾಮ್ ಜೇಟ್ಮಲಾನಿ ಇದ್ದಾರೆ.