ಜಾಲಹಳ್ಳಿ ವೃತ್ತದಲ್ಲಿ ನಿನ್ನೆ ಪ್ರತಿಭಟನೆ ವೇಳೆ ಅಲ್ಲೇ ನಡೆದು ಹೋಗುತ್ತಿದ್ದಾಗ ಲೋಹದ ತುಂಡು ಹೊಕ್ಕು ಗಾಯಗೊಂಡ ಯುವತಿ ಭಾರತಿ (19)ಗೆ ಇಂದು ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಆಕೆ ಚೇತರಿಸಿಕೊಳ್ಳುತ್ತಿದ್ದಾಳೆ. ಜಾಲಹಳ್ಳಿ ವೃತ್ತದಲ್ಲಿ ನಡೆದು ಹೋಗುವಾಗ ಬಲಗಾಲಿನ ತೊಡೆಗೆ ಏನೋ ಹೊಕ್ಕಿ ನೋವಿನಿಂದ ಬಳಲುತ್ತಿದ್ದ ಭಾರತಿ (19)ಯನ್ನು ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ನಂತರ ರಾತ್ರಿ ಕೆ.ಸಿ.ಜನರಲ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಯುವತಿಯ ಕಾಲಿನ ಸಿಟಿ ಸ್ಕ್ಯಾನ್ ಮಾಡಿದಾಗ ಮೂಳೆ ಪಕ್ಕದಲ್ಲಿ ಲೋಹದ ತುಂಡು ಕುಳಿತಿರುವುದು ಕಂಡುಬಂತು ಎಂದು ಆಸ್ಪತ್ರೆ ಅಕ್ಷಕ ಡಾ.ಮಂಜುನಾಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇಂದು ಬೆಳಗ್ಗೆ ಶಸ್ತ್ರಚಿಕಿತ್ಸೆ ನಡೆಸಿ ಲೋಹದ ತುಂಡನ್ನು ಹೊರತೆಗೆದಿದ್ದು, ಅದು ಪೆಲಟ್ ಮಾದರಿಯಿದೆ ಎಂದು ವೈದ್ಯರು ಹೇಳಿದ್ದಾರೆ.
ಪೆಲಟ್ 7 ಎಂಎಂ ಅಗಲ, 10 ಎಂಎಂ ಉದ್ದ, 4 ಎಂಎಂ ದಪ್ಪವಿದೆ. ಅದೃಷ್ಟವಶಾತ್ ಈ ಪೆಲಟ್ ನರಗಳಿಗೆ ಹಾನಿ ಮಾಡಿಲ್ಲ ಎಂದು ತಿಳಿಸಿದ್ದಾರೆ. ಭಾರತಿ ಅವರಿಗೆ ಇನ್ನು 10 ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುವುದು ಎಂದು ವೈದ್ಯರು ಹೇಳಿದ್ದಾರೆ.
ಖಾದರ್ ಭೇಟಿ:
ಕೆ.ಸಿ.ಜನರಲ್ ಆಸ್ಪತ್ರೆಗೆ ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಭೇಟಿ ನೀಡಿ ಗಾಯಾಳು ಭಾರತಿಯ ಆರೋಗ್ಯ ವಿಚಾರಿಸಿದ್ದಾರೆ. ಗಾಯಾಳುವಿನ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.