ಬೆಂಗಳೂರು, ಏ.19-ಮೆಟ್ರೋ ನಿಗಮಕ್ಕೆ ಇದು ಒಂದು ಐತಿಹಾಸಿಕ ದಿನವಾಗಿದ್ದು, ಸುರಂಗ ಮಾರ್ಗ ನಿರ್ಮಾಣದಲ್ಲಿ ತೊಡಗಿದ್ದ ಗೋದಾವರಿ ಯಂತ್ರ ಹೊರ ಬರುವ ಮೂಲಕ ಇತಿಹಾಸ ಸೃಷ್ಟಿಸಿದೆ. ಮೆಟ್ರೋ ಸುರಂಗ ಮಾರ್ಗವನ್ನು ಪೂರ್ಣಗೊಳಿಸಿ ಗೋದಾವರಿ ಹೊರ ಬರುತ್ತಿರುವ ಹಿನ್ನೆಲೆಯಲ್ಲಿ ಮೆಟ್ರೋ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲಾಗಿದೆ. ಸಂಪಿಗೆ ರಸ್ತೆಯಿಂದ ಸುರಂಗ ಮಾರ್ಗ ಕೊರೆಯಲು ಮೂರು ವರ್ಷಗಳ ನಿರಂತರ ಪ್ರಯಾಣ ಮುಗಿಸಿ ಇಂದು 937 ಕಿ.ಮೀ. ಕ್ರಮಿಸಿ ಹೊರಬಂದಿದೆ.
ಸಂಪಿಗೆರಸ್ತೆಯಿಂದ ಮೆಜೆಸ್ಟಿಕ್ ತಲುಪಿದ ಗೋದಾವರಿ (ಟನಲ್ ಬೋರಿಂಗ್ ಮಿಷನ್-ಟಿಡಿಎಂ)ಯನ್ನು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಮತ್ತಿತರ ಅಧಿಕಾರಿಗಳು ಬರಮಾಡಿಕೊಂಡರು. ಮೂಲ ಯೋಜನೆ ಪ್ರಕಾರ ಉತ್ತರ-ದಕ್ಷಿಣ ಕಾರಿಡಾರ್ನಲ್ಲಿ ಜಕ್ಕರಾಯನಕೆರೆ ಮೈದಾನದ ಬಳಿಯಿಂದ ಮೆಜೆಸ್ಟಿಕ್ವರೆಗೆ ಜೋಡಿ ಸುರಂಗ ಮಾರ್ಗ ನಿರ್ಮಿಸಲು ಗೋದಾವರಿ ಮುಂದಾಗಿತ್ತು. 2014 ಜೂನ್ ವೇಳೆಗೆ ಸುಮಾರು 350 ಮೀಟರ್ ಸುರಂಗ ಕೊರೆದ ಗೋದಾವರಿ ಕಟರ್ಹೆಡ್ ಹಾಳಾಗಿ ಖೋಡೆ ವೃತ್ತದ ಸಮೀಪ ನೆಲದಾಳದ ಬಂಡೆ ಕೊರೆಯುವಾಗ ಕೆಟ್ಟು ನಿಂತಿತ್ತು.
ಹಿಂದಕ್ಕೆ ಅಥವಾ ಮುಂದಕ್ಕೆ ಚಲಿಸದೆ ಇದ್ದಿದ್ದರಿಂದ ಇದರ ಕಟರ್ ಹೆಡ್ ಬದಲಾವಣೆ ಮಾಡಿ ಕೆಲಸ ಮುಂದುವರೆಸಲು ಹಾಗೂ ಮಾರ್ಗರಿಟ ಎಂಬ ಮತ್ತೊಂದು ಯಂತ್ರ ಬಳಸಿ ಕೆಲಸ ಪ್ರಾರಂಭಿಸಲು ನಿರ್ಧರಿಸಲಾಯಿತು. ಅದರಂತೆ ಮಾರ್ಗರಿಟ ಹಾಗೂ ಗೋದಾವರಿ ನಮ್ಮ ಮೆಟ್ರೋದ ಒಂದನೆ ಹಂತದ ಮಾರ್ಗವನ್ನು ಪೂರೈಸಿದ್ದು, ಮೂರ್ನಾೆಲ್ಕು ತಿಂಗಳಲ್ಲಿ ಸಾರ್ವಜನಿಕ ಸಂಚಾರ ಮುಕ್ತಗೊಳ್ಳಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ಸಿಂಗ್ ಕರೋಲಾ ತಿಳಿಸಿದ್ದಾರೆ.