ತುಮಕೂರು, ಏ.12-ದಾವಣಗೆರೆ ಮೂಲದ ಯುವಕನೊಬ್ಬ ರೈಲಿನಲ್ಲಿ ಬಂದು ನಂತರ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರೈಲ್ವೆ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ದಾವಣಗೆರೆಯ ಭಗತ್ಸಿಂಗ್ ನಗರ ನಿವಾಸಿ ಮಹದೇವಪ್ಪ ಎಂಬುವರ ಮಗ ವೀರಣ್ಣ (34) ಆತ್ಮಹತ್ಯೆಗೆ ಶರಣಾದ ಯುವಕ. ದಾವಣಗೆರೆಯಿಂದ ಬೆಂಗಳೂರಿಗೆ ಬರಲು ಟಿಕೆಟ್ ಪಡೆದು ವೀರಣ್ಣ ರೈಲಿನಲ್ಲಿ ರಾತ್ರಿ ಪ್ರಯಾಣ ಬೆಳೆಸಿದ್ದಾನೆ. ಗುಬ್ಬಿ ರೈಲು ನಿಲ್ದಾಣದಲ್ಲಿ ನಿಂತಿದೆ.
ಈ ವೇಳೆ ರೈಲಿನಿಂದ ಇಳಿದ ವೀರಣ್ಣ ಆತ್ಮಹತ್ಯೆಗೆ ನಿರ್ಧರಿಸಿ ಇನ್ನೇನು ರೈಲು ಹೊರಡಬೇಕೆನ್ನುವಾಗ ರೈಲಿಗೆ ತಲೆ ಕೊಟ್ಟಿದ್ದು, ರುಂಡ-ಮುಂಡ ಬೇರ್ಪಟ್ಟು ದಾರುಣವಾಗಿ ಸಾವನ್ನಪ್ಪಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ರೈಲ್ವೆ ಠಾಣೆಯ ಸಬ್ಇನ್ಸ್ಪೆಕ್ಟರ್ ಕಾಂತರಾಜು ಪ್ರಕರಣ ದಾಖಲಿಸಿಕೊಂಡು ಮೃತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.