ಬೆಂಗಳೂರು, ಏ.11- ವಲಸೆ ಕಾರ್ಮಿಕರ ಸುರಕ್ಷತೆ, ಭದ್ರತೆ, ಕಲ್ಯಾಣಕ್ಕಾಗಿ ಒರಿಸ್ಸಾ ರಾಜ್ಯದೊಂದಿಗೆ ಕರ್ನಾಟಕ ಒಡಂಬಡಿಕೆ ಮಾಡಿಕೊಳ್ಳಲು ಮುಂದಾಗಿದೆ. ಇಂದು ಈ ಸಂಬಂಧ ರಾಜ್ಯ ಕಾರ್ಮಿಕ ಸಚಿವ ಪಿ.ಟಿ.ಪರಮೇಶ್ವರ್ ನಾಯಕ್ ಹಾಗೂ ಒರಿಸ್ಸಾ ರಾಜ್ಯದ ಕಾರ್ಮಿಕ ಇಎಸ್ಐ, ಗಣಿ ಮತ್ತು ಹುಕ್ಕು ಸಚಿವ ಪ್ರಫುಲ್ಲ ಕುಮಾರ್ ಮಲ್ಲಿಕ್ ಜತೆ ಉನ್ನತ ಮಟ್ಟದ ಸಭೆಯನ್ನು ವಿಧಾನಸೌಧದಲ್ಲಿ ನಡೆಸಲಾಯಿತು. ಸಭೆಯಲ್ಲಿ ಉದ್ದೇಶಿತ ಒಡಂಬಡಿಕೆಗೆ ರೂಪುರೇಷೆ ಮತ್ತಿತರ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು.
ಒರಿಸ್ಸಾ ರಾಜ್ಯದ ದದಾನ್ ಕಾರ್ಮಿಕರೆಂದು ಕರೆಯಲ್ಪಡುವ ವಲಸೆ ಕಾರ್ಮಿಕರು ಉದ್ಯೋಗ ಅರಸಿ ಕರ್ನಾಟಕಕ್ಕೆ ಬರುತ್ತಿದ್ದಾರೆ ಅದರಲ್ಲೂ ಬೆಂಗಳೂರಿನಲ್ಲಿ ಕಟ್ಟಡ ನಿರ್ಮಾಣ ಹಾಗೂ ಇತರೆ ಕಾರ್ಮಿಕರಿಗೆ ಯೋಗ್ಯ ತಾಣವಾಗಿದೆ. ಇದರಿಂದ ನಗರದಲ್ಲಿ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು 11,705 ದದಾನ್ ಕಾರ್ಮಿಕರ ನೋಂದಾಯಿಸಿದೆ. ರಾಜ್ಯದಲ್ಲಿ ಒರಿಸ್ಸಾದ 20 ಸಾವಿರಕ್ಕೂ ಹೆಚ್ಚು ದದಾನ್ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆಂದು ಕಾರ್ಮಿಕ ಇಲಾಖೆ ಅಂದಾಜಿಸಿದೆ.
ರಾಜ್ಯ ಅಭಿವೃದ್ಧಿ ಚಟುವಟಿಕೆಗಳ ಪ್ರಮುಖ ತಾಣವಾಗಿರುವುದಲ್ಲದೆ, ನಿರ್ಮಾಣದಲ್ಲಿ ವಲಸೆ ಕಾರ್ಮಿಕರ ಆಶ್ರಯ ತಾಣವಾಗಿದೆ. ಇದರಿಂದ ರಾಜ್ಯ ಸರ್ಕಾರ ವಲಸೆ ಕಾರ್ಮಿಕರ ಕಲ್ಯಾಣ, ಉದ್ಯೋಗ ಭದ್ರತೆ ಕಾಪಾಡಲು ನಿಗಾವಹಿಸುತ್ತಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.