ಯಾದಗಿರಿ: ವ್ಯಕ್ತಿ ಸಾವನ್ನಪ್ಪಿ ಆತನ ಶವಸಂಸ್ಕಾರ ಮಾಡಿದ್ರೂ ಕೂಡ 1 ವರ್ಷದ ಬಳಿಕ ಶವವನ್ನ ಗುಂಡಿಯಿಂದ ತೆಗೆದು ಮರಣೋತ್ತರ ಪರೀಕ್ಷೆ ಮಾಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿಯ ಶಹಪುರದ ಗುರುಸಣಗಿಯ ಮುಹಮ್ಮದ್ ಅಲಿ ಎಂಬವರು ಕಳೆದ ವರ್ಷ ಮಾರ್ಚ್ 27ರಂದು ಅಪಘಾತವೊಂದ್ರಲ್ಲಿ ಮೃತಪಟ್ಟಿದ್ರು. ನಂತ್ರ ಶವವನ್ನ ಮರಣೋತ್ತರ ಪರೀಕ್ಷೆ ಮಾಡಿಸದೇ ಸಂಬಂಧಿಕರು ಅವರ ಅಂತ್ಯಸಂಸ್ಕಾರ ಮಾಡಿದ್ದರು.
2015ರ ಮಾರ್ಚ್ 27ರಂದು ಟಂಟಂ ಮತ್ತು ಲಾರಿ ಮಧ್ಯೆ ನಡೆದ ಅಪಘಾತ ಪ್ರಕರಣದ ಕುರಿತು ವಡಗೇರಾ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆದ್ರೆ ಟಂಟಂ ಮತ್ತು ಲಾರಿ ಅಪಘಾತದ ಕೇಸ್ ಅಂತ್ಯವಾಗಲು ಮತ್ತು ಅಪಘಾತದಲ್ಲಿ ಹಾಳಾದ ಎರಡು ವಾಹನಗಳ ವಿಮೆಯ ಪರಿಹಾರ ಹಣಕ್ಕೆ ಮೃತಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆಯ ವರದಿ ಬೇಕಿತ್ತು. ಹೀಗಾಗಿ ಈಗ ಶವವನ್ನ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಲಾಗಿದೆ.
ಮೃತರ ಕುಟುಂಬದವರ ತಿಳುವಳಿಕೆ ಕೊರತೆ ಹಾಗೂ ಪೊಲೀಸರ ನಿರ್ಲಕ್ಷ್ಯವೇ ಇವೆಲ್ಲದಕ್ಕೂ ಕಾರಣ ಅಂತ ಹೇಳಲಾಗಿದೆ.