ನವದೆಹಲಿ: ಕಳೆದ ಭಾನುವಾರ ರಾತ್ರಿ ಮೊಹಾಲಿಯಲ್ಲಿ ಆಸ್ಚ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಸ್ನಾಯು ಸೆಳೆತಕ್ಕೆ ಗುರಿಯಾಗಿ ಗಾಯಗೊಂಡಿದ್ದ ಭಾರತ ತಂಡದ ಸ್ಫೋಟಕ ಬ್ಯಾಟ್ಸಮನ್ ಯುವರಾಜ್ ಸಿಂಗ್ ಅವರು ವಿಶ್ವಕಪ್ ಟಿ20ಯಿಂದ ಹೊರಬಿದಿದ್ದು, ಅವರ ಸ್ಥಾನಕ್ಕೆ ಕನ್ನಡಿಗ ಮನಿಷ್ ಪಾಂಡೆ ಅವರನ್ನು ಆಯ್ಕೆ ಮಾಡಲಾಗಿದೆ.
ಹಿಮ್ಮಡಿ ನೋವಿನಿಂದ ಬಳಲುತ್ತಿರುವ ಯುವರಾಜ್ ಸಿಂಗ್ ಅವರನ್ನು ನಾಳೆ ವೆಸ್ಟ್ ಇಂಡೀಸ್ ವಿರುದ್ಧ ನಡೆಯುವ ಸೆಮಿ ಫೈನಲ್ ಪಂದ್ಯದಿಂದ ಕೈಬಿಡಲಾಗಿದ್ದು, ಅವರ ಬದಲು ಕರ್ನಾಟಕದ ಸ್ಫೋಟಕ ಬ್ಯಾಟ್ಸ್ಮನ್ ಮನಿಷ್ ಪಾಂಡೆ ಅವರಿಗೆ ಸ್ಥಾನ ನೀಡಲಾಗಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಟೀಂ ಇಂಡಿಯಾ ವ್ಯವಸ್ಥಾಪಕ ರವಿಶಾಸ್ತ್ರಿ ಅವರು, ಸೆಮಿಫೈನಲ್ ನಲ್ಲಿ ಯುವರಾಜ್ ಸಿಂಗ್ ಅವರ ಕೊರತೆ ನಮ್ಮನ್ನು ಕಾಡಲಿದೆ ಎಂದು ಹೇಳಿದ್ದಾರೆ.
ಆಸಿಸ್ ವಿರುದ್ಧದ ಪಂದ್ಯದಲ್ಲಿ ಯುವರಾಜ್ ಸಿಂಗ್ 5 ರನ್ಗಳಿಸಿದ್ದ ವೇಳೆ ಗಾಯಗೊಂಡಿದ್ದರು. ಇದರ ನಡುವೆಯೂ ಯುವರಾಜ್ ಕೆಲಕಾಲ ಬ್ಯಾಟಿಂಗ್ ನಡೆಸಿದ್ದರು.
ಆಸ್ಟ್ರೇಲಿಯಾ ಪ್ರವಾಸದ ವೇಳೆ 5ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದಿದ್ದ ಪಾಂಡೆ, ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರಮುಖ ಆಕಾಂಕ್ಷಿಯಾಗಿದ್ದರು. ಐಪಿಎಲ್ನಲ್ಲಿ ಶತಕ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಶ್ರೆಯಕ್ಕೂ ಈ ಹಿಂದೆ ಪಾಂಡೆ ಪಾತ್ರರಾಗಿದ್ದಾರೆ.