ಕಲಬುರಗಿ,ಮಾ.23-ನಗರ ಹೊರವಲಯದ ಕೇಂದ್ರ ಕಾರಾಗೃಹದಿಂದ ನಾಲ್ವರು ವಿಚಾರಣಾಧೀನ ಕೈದಿಗಳು ಪರಾರಿಯಾದ ಘಟನೆ ಇಂದು ಬೆಳಗಿನಜಾವ ನಡೆದಿದೆ.
ಕೊಲೆ ಆರೋಪ ಮತ್ತು ಪೋಸ್ಕೋ ಕಾಯ್ದೆಯಡಿ ಬಂಧಿತರಾಗಿದ್ದ ನಾಲ್ವರು ವಿಚಾರಣಾಧೀನ ಕೈದಿಗಳು ಕಾರಾಗೃಹದ ಗೋಡೆ ಕೊರೆದು ಪರಾರಿಯಾಗಿದ್ದಾರೆ.
ಕೊಲೆ ಆರೋಪದಲ್ಲಿ ಬಂಧಿತನಾಗಿದ್ದ ಶಿವಕುಮಾರ ಮತ್ತು ಪೋಸ್ಕೋ ಕಾಯ್ದೆಯಡಿ ಬಂಧಿತರಾಗಿದ್ದ ಸುನೀಲಕುಮಾರ ನಾಗೇಂದ್ರಪ್ಪ, ತಾಜೋದ್ದೀನ್ ಮತ್ತು ಲಕ್ಷ್ಮಣ ಎಂಬುವವರೆ ಪರಾರಿಯಾದ ಕೈದಿಗಳು.
ಬೆಳಗಿನಜಾವ 1.55 ರಿಂದ 2 ಗಂಟೆ ಅವಧಿಯೊಳಗೆ ಕೈದಿಗಳು ತಾವಿದ್ದ ಕೋಣೆಯ ಬ್ಯಾರಕ್ ಕಬ್ಬಿಣದ ರಾಡ್ ಮುರಿದು ಗೋಡೆ ಕನ್ನ ಕೊರೆದು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕಾರಾಗ್ರಹದ ಗೋಡೆ ಕೊರೆದು ಕೈದಿಗಳು ಪರಾರಿಯಾದ ಸುದ್ದಿ ತಿಳಿದು ಈಶಾನ್ಯ ವಲಯ ಪೊಲೀಸ್ ಮಹಾನಿರ್ದೇಶಕ ಬಿ.ಶಿವಕುಮಾರ, ಎಸ್.ಪಿ.ಅಮಿತಸಿಂಗ್, ಗ್ರಾಮೀಣ ಡಿಎಸ್ಪಿ ವಿಜಯ್ ಅಂಚಿ, ಫರಹತಾಬಾದ ಪೊಲೀಸ್ ಠಾಣೆ ಎ.ಎಸ್.ಪಿ., ಎಂ.ಬಿ.ನಗರ ಪಿಎಸ್ಐ ಜೆ.ಎಚ್.ಇನಾಮದಾರ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಫರಹತಾಬಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಧನಕ್ಕೆ ಜಾಲ
ಕೇಂದ್ರ ಕಾರಾಗೃಹದ ಗೋಡೆ ಕೊರೆದು ಪರಾರಿಯಾದ ನಾಲ್ವರು ವಿಚಾರಣಾಧೀನ ಕೈದಿಗಳ ಪತ್ತೆಗಾಗಿ ನಗರದ ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಜಿಲ್ಲೆಯಾದ್ಯಂತ ಇರುವ ಪೊಲೀಸ್ ಠಾಣೆ ಮತ್ತು ಚೆಕ್ ಪೋಸ್ಟ್ ಗಳಿಗೆ ಈ ಬಗ್ಗೆ ಮಾಹಿತಿ ನೀಡಿ ಪರಿಶೀಲನೆ ನಡೆಸಲು ಸೂಚಿಸಲಾಗಿದೆ. ಕಾರಾಗ್ರಹದಿಂದ ಪರಾರಿಯಾದ ಕೈದಿಗಳನ್ನು ಶೀಘ್ರವೇ ಬಂಧಿಸಲಾಗುವದು ಎಂದು ಈಶಾನ್ಯ ವಲಯ ಪೊಲೀಸ್ ಮಹಾನಿರ್ದೇಶಕ ಬಿ.ಶಿವಕುಮಾರ ಅವರು ” ಸಂಜೆವಾಣಿ” ಗೆ ತಿಳಿಸಿದ್ದಾರೆ.