ಕರ್ನಾಟಕ

2 ವರ್ಷದಲ್ಲಿ ಪಂಪ್‌ಸೆಟ್‌ಗೆ ಹಗಲಲ್ಲೂ ವಿದ್ಯುತ್‌ ಪೂರೈಕೆ

Pinterest LinkedIn Tumblr

m7H-NrGHಹುಬ್ಬಳ್ಳಿ: ರೈತರಿಗೆ 2018ರ ವೇಳೆಗೆ ಹಗಲು ಹೊತ್ತಿನಲ್ಲಿಯೂ ವಿದ್ಯುತ್‌ ಒದಗಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕಿನಲ್ಲಿ 20 ಮೆಗಾವ್ಯಾಟ್‌ ಸೌರ ವಿದ್ಯುತ್‌ ಉತ್ಪಾದಿಸಲು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

ಇಲ್ಲಿನ ಹೆಸ್ಕಾಂ ಕೇಂದ್ರ ಕಚೇರಿಯಲ್ಲಿ ಗ್ರಾಹಕರ ದೂರುಗಳ ಸಹಾಯವಾಣಿ (1912)ಗೆ ಚಾಲನೆ ನೀಡಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಈಗಾಗಲೇ 60 ತಾಲೂಕುಗಳಲ್ಲಿ ಸೌರವಿದ್ಯುತ್‌ ಉತ್ಪಾದನೆಗೆ ಟೆಂಡರ್‌ ನೀಡಲಾಗಿದ್ದು, ಮೊದಲ ಹಂತದಲ್ಲಿ 1200 ಮೆಗಾವ್ಯಾಟ್‌ ಸೌರ ವಿದ್ಯುತ್‌ ಉತ್ಪಾದನೆ ಮಾಡಲಾಗುವುದು ಎಂದರು.

ರಾಯಚೂರು ಉಷ್ಣ ವಿದ್ಯುತ್‌ ಘಟಕಕ್ಕೆ ನೀರಿನ ಸಮಸ್ಯೆ ಉಂಟಾಗಿದೆ. ಬರಗಾಲದಿಂದಾಗಿ ನದಿಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಸಮಸ್ಯೆಯಾಗಿದೆ. ಆದರೆ ಕಲ್ಲಿದ್ದಲು ಕೊರತೆಯಿಲ್ಲ. ಮೊದಲು 2-3 ದಿನಗಳ ಕಲ್ಲಿದ್ದಲು ಸಂಗ್ರಹ ಇಟ್ಟುಕೊಳ್ಳಲಾಗುತ್ತಿತ್ತು. ಈಗ 20 ದಿನಗಳಿಗಾಗುವಷ್ಟು ಕಲ್ಲಿದ್ದಲು ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗಿಲ್ಲ ತೊಂದರೆ:
ಪರೀಕ್ಷಾ ಸಮಯದಲ್ಲಿ ವಿದ್ಯುತ್‌ ಕಡಿತ ಮಾಡಿ ವಿದ್ಯಾರ್ಥಿಗಳಿಗೆ ತೊಂದರೆ ನೀಡುವ ಉದ್ದೇಶವಿಲ್ಲ. ಶಾಲೆ-ಕಾಲೇಜುಗಳ ಪರೀಕ್ಷೆಗಳು ನಡೆಯುತ್ತಿರುವುದರಿಂದ ವಿದ್ಯುತ್‌ ಕಡಿತ ಮಾಡುವುದಿಲ್ಲ ಎಂದರು.

ನಿರಂತರ ಜ್ಯೋತಿ ಯೋಜನೆಯನ್ನು ಎಲ್ಲ ತಾಲೂಕುಗಳಿಗೆ ವಿಸ್ತರಿಸಲಾಗುವುದು. ಪಾವಗಡದಲ್ಲಿ ಸೌರ ಪಾರ್ಕ್‌ ಸ್ಥಾಪಿಸುವ ಪ್ರಕ್ರಿಯೆ ನಡೆದಿದೆ. ಅಲ್ಲಿ 12000 ಎಕರೆ ಜಮೀನಿನಲ್ಲಿ ರೈತರ ಭೂಮಿ ಸ್ವಾಧೀನಪಡಿಸಿಕೊಳ್ಳದೇ ರೈತರಿಂದ ಭೂಮಿಯನ್ನು ಬಾಡಿಗೆಗೆ ಪಡೆಯಲಾಗುತ್ತಿದೆ. ರೈತರಿಗೆ ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ 21,000 ರೂ., ನೀಡಲಾಗುತ್ತಿದೆ. ಇನ್ನೆರಡು ವರ್ಷಗಳಲ್ಲಿ ಸೌರ ಪಾರ್ಕ್‌ ಸಿದ್ಧಗೊಳ್ಳಲಿದೆ. ಕೇಂದ್ರ ಸರ್ಕಾರ ಈ ಯೋಜನೆಯನ್ನು ಆಸಕ್ತಿಯಿಂದ ಗಮನಿಸುತ್ತಿದ್ದು, ಒಂದು ವೇಳೆ ಇಲ್ಲಿ ಯಶಸ್ವಿಗೊಂಡರೆ ದೇಶಾದ್ಯಂತ ಯೋಜನೆಯನ್ನು ಅನುಷ್ಠಾನಗೊಳಿಸಲಿದೆ ಎಂದರು.
-ಉದಯವಾಣಿ

Write A Comment