ಬೆಂಗಳೂರು:ಇದುವರೆಗೆ ನನ್ನ ಮಗನ ಸಾವಿಗೆ ನ್ಯಾಯ ಸಿಕ್ಕಿಲ್ಲ. ಇನ್ನೊಂದು ವಾರದಲ್ಲಿ ರಾಜ್ಯ ಸರ್ಕಾರ ಸ್ಪಂದಿಸಬೇಕು. ಇಲ್ಲದಿದ್ದರೆ ಮಗನ ಶವವನ್ನು ಹೊರತೆಗೆದು ವಿಧಾನಸೌಧದ ಮುಂದಿಟ್ಟು ಪ್ರತಿಭಟಿಸುವುದಾಗಿ ನಿಗೂಢವಾಗಿ ಸಾವನ್ನಪ್ಪಿರುವ ದಕ್ಷ ಅಧಿಕಾರಿ ಡಿಕೆ ರವಿ ತಾಯಿ ಗೌರಮ್ಮ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಆನಂದ್ ರಾವ್ ವೃತ್ತದಲ್ಲಿ ಡಿಕೆ ರವಿ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ನಡೆಸಿದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಗೌರಮ್ಮ ಮಾತನಾಡಿದರು.
ನನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದಿದ್ದ ನನ್ನ ಸೊಸೆಯೂ ಕೂಡಾ ಈವರೆಗೂ ನನ್ನ ಮಾತನಾಡಿಸಲು ಬಂದಿಲ್ಲ. ಆಕೆ ಮಗ (ಗಂಡ)ನ ಪ್ರಥಮ ವರ್ಷದ ಪುಣ್ಯತಿಥಿ ಕಾರ್ಯಕ್ರಮಕ್ಕೂ ಹಾಜರಾಗಿಲ್ಲ. ಆಕೆ ನನ್ನ ಬಳಿ ಬಾರದಂತೆ ಕೆಲವರು ತಡೆಯುತ್ತಿದ್ದಾರೆ ಎಂದು ಬೆಂಗಳೂರಿಗೆ ಆಗಮಿಸುವ ಮುನ್ನ ಡಿಕೆ ರವಿ ತಾಯಿ ಗೌರಮ್ಮ ಆರೋಪಿಸಿದ್ದರು.
ಈ ಸಂದರ್ಭದಲ್ಲಾದರೂ ಡಿಕೆ ರವಿ ಪತ್ನಿ ಕುಸುಮಾ ಆಗಮಿಸುತ್ತಾಳೆ ಎಂಬ ವಿಶ್ವಾಸವಿದೆ ಎಂದರು. ನನ್ನ ಪರಿಸ್ಥಿತಿ ಅವರಿಗೂ ಬರುವುದು ಬೇಡ ಎಂದು ಗೌರಮ್ಮ ಅಲವತ್ತುಕೊಂಡರು.
ನನ್ನ ಮಗಳು ಸದ್ಯಕ್ಕೆ ಇಲ್ಲಿಲ್ಲ, ಅಮೆರಿಕಾದಲ್ಲಿದ್ದಾಳೆ:ಹನುಮಂತರಾಯಪ್ಪ
ನನ್ನ ಮಗಳು ಕುಸುಮಾ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಕ್ಕೆ ತೆರಳಿದ್ದಾಳೆ. ಹಾಗಾಗಿ ನನಗೂ ನೋವು ಕಾಡುತ್ತಿದೆ. ಹಾಗಾಗಿ ನಾನೂ ಕೂಡಾ ಡಿಕೆ ರವಿ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ ಎಂದು ಡಿಕೆ ರವಿ ಮಾವ ಹನುಮಂತರಾಯಪ್ಪ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
-ಉದಯವಾಣಿ