
ಬೆಂಗಳೂರು: ನಟ ದರ್ಶನ್ ವಿರುದ್ಧ ಪತ್ನಿ ವಿಜಯಲಕ್ಷ್ಮಿ ನೀಡಿದ್ದ ದೂರಿನ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ದರ್ಶನ್ ತ್ಯಾಗರಾಜನಗರದಲ್ಲಿರುವ ಎಸಿಪಿ ಕಚೇರಿಗೆ ಹಾಜರಾಗಿ ಮುಚ್ಚಳಿಕೆ ಪತ್ರ ಬರೆದುಕೊಟ್ಟಿದ್ದಾರೆ.
ಸುಮಾರು 1 ಗಂಟೆ ಕಾಲ ಎಸಿಪಿ ಲೋಕೇಶ್ ಕುಮಾರ್ ದರ್ಶನ್ ಅವರ ವಿಚಾರಣೆ ನಡೆಸಿದರು. ಪತ್ನಿ ವಿಜಯಲಕ್ಷ್ಮಿ ನನ್ನ ಮಗನನ್ನು ನನ್ನಿಂದ ದೂರ ಮಾಡಲು ಯತ್ನಿಸುತ್ತಿದ್ದಾಳೆ. ವಿನಾಕಾರಣ ನನ್ನ ಮೇಲೆ ಅನುಮಾನ ಪಡುತ್ತಾಳೆ. ವಿಜಯಲಕ್ಷ್ಮಿ ಮತ್ತು ನನ್ನ ನಡುವೆ ಕೆಲ ಸಮಸ್ಯೆಗಳಿದ್ದು ಅಂಬರೀಷ್ ಸಮ್ಮುಖದಲ್ಲಿ ಬಗೆಹರಿಸಿಕೊಳ್ಳುವುದಾಗಿ ದರ್ಶನ್ ಹೇಳಿದ್ದಾರೆ.
ಇನ್ನು ವಿಜಯಲಕ್ಷ್ಮಿ ವಾಸಿಸುತ್ತಿರುವ ಅಪಾರ್ಟ್ ಮೆಂಟ್ ಬಾಡಿಗೆ ನಾನೇ ಕಟ್ಟುತ್ತಿದ್ದೇನೆ. ಕಳೆದ ಬಾರಿ ಜೋರಾಗಿ ಜಗಳ ನಡೆದಾಗ ಆಕೆ ಪ್ರತ್ಯೇಕವಾಗಿ ವಾಸಿಸುವುದಾಗಿ ಹೇಳಿದ್ದರು. ಅದಕ್ಕೆ ನಾನು ಒಪ್ಪಿದ್ದೆ. ನಾನು ನನ್ನ ಮಗನನ್ನು ನೋಡಲು ಹೋಗಿದ್ದೆ. ಆದರೆ ಸೆಕ್ಯೂರಿಟಿ ಗಾರ್ಡ್ ನನ್ನನ್ನು ಒಳ ಹೋಗದಂತೆ ತಡೆದ. ನನ್ನ ಮನೆಗೆ ನಾನು ಹೋಗಲು ಯಾಕೆ ತಡೆಯುತ್ತೀಯಾ ಎಂದು ಗದರಿದೆ ಅಷ್ಟೇ. ನಾನು ಯಾರ ಮೇಲೂ ಹಲ್ಲೆ ಮಾಡಿಲ್ಲ ಎಂದು ದರ್ಶನ್ ಹೇಳಿಕೆ ನೀಡಿದ್ದಾರೆ.