ಬೆಂಗಳೂರು, ಮಾ. ೧೦ – ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಸಿದ್ದರಾಮಯ್ಯ ಅವರ ಧೋರಣೆಯೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೈಕಮಾಂಡ್ಗೆ ದೂರು ನೀಡಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಸಮಾಧಾನಕ್ಕೆ ಕಾರಣವಾಗಿದೆ.
ಜಿಲ್ಲಾ ತಾಲ್ಲೂಕು ಹಾಗೂ ವಿಧಾನಸಭೆ ಉಪ ಚುನಾವಣೆ ಸೋಲಿಗೆ ನನ್ನನ್ನೇ ನೇರ ಗುರಿಯಾಗಿಸಿಕೊಂಡು ಪರಮೇಶ್ವರ್ ಆರೋಪ ಮಾಡಿರುವುದು ಸರಿಯಲ್ಲ ಎಂದು ಸಿದ್ದರಾಮಯ್ಯ ತಮ್ಮ ಆಪ್ತರ ಬಳಿ ಅಸಮಾಧಾನ ಹಾಗೂ ಬೇಸರ ಹೊರಹಾಕಿದ್ದಾರೆ.
ಮಾ. ೧೮ ರಂದು ಬಜೆಟ್ ಮಂಡನೆಯಾದ ಬಳಿಕ ಹೈಕಮಾಂಡ್ ಭೇಟಿ ಮಾಡಿ ವಾಸ್ತವಾಂಶಗಳ ಬಗ್ಗೆ ಮನವರಿಕೆ ಮಾಡಿಕೊಡಲು ದೆಹಲಿಗೆ ತೆರಳಲು ಸಿದ್ದರಾಮಯ್ಯ ಮುಂದಾಗಿದ್ದಾರೆ.
ಚುನಾವಣೆಯ ಸೋಲು, ದುಬಾರಿ ವಾಚ್ ಪ್ರಕರಣ ಸೇರಿದಂತೆ ಹಲವು ವಿಷಯಗಳ ಕುರಿತು ಪರಮೇಶ್ವರ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರಿಗೆ ದೂರು ನೀಡಿದ್ದರು.
ಪಕ್ಷದಲ್ಲಿ ಎಲ್ಲರೂ ಜತೆಗೂಡಿ ಚುನಾವಣೆಯನ್ನು ಎದುರಿಸಿದೆವು. ಬಿಜೆಪಿ, ಜೆಡಿಎಸ್ಗಿಂತಲೂ ಹೆಚ್ಚಿನ ಸ್ಥಾನವನ್ನು ನಾವೇ ಗೆದ್ದಿದ್ದೇವೆ. ಹೀಗಿದ್ದರೂ ತಮ್ಮ ವಿರುದ್ಧವೇ ಹೈಕಮಾಂಡ್ಗೆ ದೂರು ನೀಡಿರುವುದು ಸರಿಯಲ್ಲ ಎಂದು ಆಪ್ತರ ಬಳಿ ಅಸಮಾಧಾನ ಹೊರಹಾಕಿದ್ದಾರೆ.
ಕರ್ನಾಟಕ