ಬೆಂಗಳೂರು: ನಟ ದರ್ಶನ್ ದಾಂಪತ್ಯ ಕಿತ್ತಾಟ ಮತ್ತೆ ಠಾಣೆಯ ಮೆಟ್ಟಿಲೇರಿದೆ. ‘ಪತಿ ಮನೆ ಹತ್ತಿರ ಬಂದು ಗಲಾಟೆ ಮಾಡುತ್ತಾರೆ’ ಎಂದು ಆರೋಪಿಸಿ ಅವರ ಪತ್ನಿ ವಿಜಯಲಕ್ಷ್ಮಿ ಬುಧವಾರ ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆಗೆ ದೂರು ಕೊಟ್ಟಿದ್ದಾರೆ.
‘ಹೊಸಕೆರೆಹಳ್ಳಿಯಲ್ಲಿರುವ ತಮ್ಮ ಮನೆ ಬಳಿ ಬಂದು ದರ್ಶನ್ ಗಲಾಟೆ ಮಾಡುತ್ತಾರೆ. ಠಾಣೆಗೆ ಕರೆಸಿ ಅವರಿಗೆ ಬುದ್ಧಿವಾದ ಹೇಳಿ ಎಂದು ವಿಜಯಲಕ್ಷ್ಮಿ ಅವರು ಬುಧವಾರ ಸಂಜೆ ಏಳು ಗಂಟೆಗೆ ದೂರು ಕೊಟ್ಟಿದ್ದಾರೆ. ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ಕುಮಾರ್ ತಿಳಿಸಿದ್ದಾರೆ.
ಹಲ್ಲೆ ನಡೆಸಿದ ಪತಿ, ರಿವಾಲ್ವರ್ ತೋರಿಸಿ ಕೊಲೆ ಬೆದರಿಕೆ ಹಾಕಿದ್ದಾಗಿ ವಿಜಯಲಕ್ಷ್ಮಿ ಅವರು 2011ರ ಸೆಪ್ಟಂಬರ್ನಲ್ಲಿ ವಿಜಯನಗರ ಠಾಣೆಗೆ ದೂರು ಕೊಟ್ಟಿದ್ದರು. ಆಗ ಕೊಲೆ ಯತ್ನ ಆರೋಪದಡಿ ದರ್ಶನ್ ಅವರನ್ನು ಬಂಧಿಸಿದ್ದ ಪೊಲೀಸರು, ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿದ್ದರು. ಒಂದು ತಿಂಗಳು ಸೆರೆವಾಸದಲ್ಲಿದ್ದ ದರ್ಶನ್, ಜಾಮೀನು ಪಡೆದು ಬಿಡುಗಡೆಯಾಗಿದ್ದರು.
ಏಳೆಂಟು ತಿಂಗಳಿಂದ ದಂಪತಿ ಮಧ್ಯೆ ಮತ್ತೆ ಜಗಳ ಆರಂಭವಾಗಿತ್ತು. ಹೀಗಾಗಿ ಇಬ್ಬರೂ ಪ್ರತ್ಯೇಕವಾಗಿದ್ದರು. ಹೊಸಕೆರೆಹಳ್ಳಿಯ ಅಪಾರ್ಟ್ಮೆಂಟ್ನಲ್ಲಿ ವಿಜಯಲಕ್ಷ್ಮಿ ವಾಸವಿದ್ದು, ದರ್ಶನ್ ರಾಜರಾಜೇಶ್ವರಿನಗರದಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಭದ್ರತಾ ಸಿಬ್ಬಂದಿ ದೂರು: ವಿಜಯಲಕ್ಷ್ಮಿ ವಾಸವಿರುವ ಅಪಾರ್ಟ್ಮೆಂಟ್ನ ಭದ್ರತಾ ಸಿಬ್ಬಂದಿ ದೇವರಾಜ್ ಎಂಬುವರ ಮೇಲೂ ದರ್ಶನ್ ಹಲ್ಲೆ ನಡೆಸಿದ್ದಾರೆ ಎಂದು ಪ್ರತ್ಯೇಕ ದೂರು ದಾಖಲಾಗಿದೆ.