ಕರ್ನಾಟಕ

ಚಿಕ್ಕಮಗಳೂರಿನಲ್ಲಿ ಒಂಟಿ ಸಲಗದ ದಾಳಿಗೆ ವ್ಯಕ್ತಿ ಬಲಿ

Pinterest LinkedIn Tumblr

tpelephant

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ದಾಳಿ ಮಾಡಿದ ಒಂಟಿ ಸಲಗವೊಂದು ವ್ಯಕ್ತಿಯೊಬ್ಬರನ್ನು ಕೊಂದು ಹಾಕಿದ್ದು, ಹಲವು ವಾಹನಗಳಿಗೆ ಹಾನಿ ಮಾಡಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

ಭಾನುವಾರ ಮುಂಜಾನೆ ಚಿಕ್ಕಮಗಳೂರಿನ ಬಣಕಲ್ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ಆಗ ತಾನೆ ಬಹಿರ್ದೆಸೆಗೆ ಹೋಗಿ ಮನೆಗೆ ವಾಪಸಾಗುತ್ತಿದ್ದ 50 ವರ್ಷದ ಶೀನ ಎಂಬಾತನನ್ನು ನೆಲಕ್ಕೆ ಅಪ್ಪಳಿಸಿ ಕೊಂದುಹಾಕಿದೆ. ಅಲ್ಲದೆ ಅದೇ ಸುತ್ತಮುತ್ತಲ ಪ್ರದೇಶದಲ್ಲಿದ್ದ 4 ಆಟೊ, 1 ಕಾರು ಹಾಗೂ ನಾಲ್ಕೈದು ಮನೆಗಳ ಹೆಂಚುಗಳನ್ನು ಕೂಡ ಒಡೆದುಹಾಕಿದೆ.

ಒಂಟಿ ಸಲಗದ ದಿಢೀರ್ ದಾಳಿಯಿಂದಾಗಿ 4 ಆಟೊ, ಒಂದು ಕಾರನ್ನು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಪ್ರಸ್ತುತ ಘಟನಾ ಪ್ರದೇಶಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸ್ಥಳೀಯರು ಹೇಳುವಂತೆ ಬೆಳಗಿನ ಜಾವ ಸುಮಾರು 3 ಗಂಟೆಯಿಂದ ಆರಂಭವಾದ ಒಂಟಿ ಸಲಗದ ದಾಂಧಲೆ ಸತತ ಒಂದೂವರೆ ಗಂಟೆಯವರೆಗೂ ಮುಂದುವರೆಯಿತು. ಹೀಗಾಗಿ ಆನೆಯ ರೌದ್ರಾವತರದಿಂದ ಭೀತಿಗೊಳಗಾದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಇತ್ತ ಆನೆ ಕಾಡಿಗೆ ಮರಳಿತೋ ಅಥವಾ ಅಲ್ಲಿಯೇ ಸುತ್ತಮುತ್ತಲ ಪ್ರದೇಶದಲ್ಲಿದೆಯೇ ಎಂಬ ಅನುಮಾನ ಗ್ರಾಮಸ್ಥರನ್ನು ಕಾಡುತ್ತಿದ್ದು, ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡೇ ಒಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸ್ಥಳದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ತಜ್ಞರಿಂದ ಶೋಧಕಾರ್ಯ ನಡೆಸುತ್ತಿದ್ದಾರೆ.

Write A Comment