ಮಂಗಳೂರು, ಮಾ.07: ನಾಡಿನಾದ್ಯಂತ ಇಂದು ಮಹಾಶಿವರಾತ್ರಿ ಸಂಭ್ರಮ. ಶಿವರಾತ್ರಿ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಶಿವ ದೇಗುಲಗಳಲ್ಲಿ ಇಂದು ಮುಂಜಾನೆಯಿಂದಲೇ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಿವನ ಅರಾಧನೆಯಲ್ಲಿ ತೊಡಗಿದ್ದರು, ಮಹಾಶಿವರಾತ್ರಿ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವುದರಿಂದ ಹೆಚ್ಚಿನವರು ಇಂದು ಮಾಂಸಹಾರಿ ಖಾದ್ಯಗಳನ್ನು ತ್ಯಜಿಸಿದರೆ ಮತ್ತೆ ಕೆಲವರು ಉಪಾವಾಸ, ವೃತಗಳಲ್ಲಿ ತೊಡಗಿರುತ್ತಾರೆ.
ಮಂಗಳೂರಿನ ಕದ್ರಿ ಶ್ರೀ ಮಂಜುನಾಥ ಕ್ಷೇತ್ರ, ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರ, ಪಾಂಡೇಶ್ವರ ಮಹಾಲಿಂಗೇಶ್ವರ ದೇವಸ್ಥಾನ, ಉರ್ವಾ ಪಂಚಲಿಂಗೇಶ್ವರ ದೇವಸ್ಥಾನ, ಕಾವೂರು ಪಂಚಲಿಂಗೇಶ್ವರ ದೇವಸ್ಥಾನ, ಸುರತ್ಕಲ್ ಇಡ್ಯಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಪಣಂಬೂರಿನ ಶ್ರೀ ನಂದನೇಶ್ವರ ದೇವಸ್ಥಾನ, ಕೆ.ಆರ್.ಇ.ಸಿ ಎದುರಿನ ಸಮುದ್ರ ತಟದಲ್ಲಿರುವ ಶ್ರೀ ಸದಾಶಿವ ಮಹಾಗಣಪತಿ ದೇವಸ್ಥಾನ ಸೇರಿದಂತೆ ವಿವಿಧ ದೇಗುಲಗಳಲ್ಲಿ ಭಕ್ತರು ಶಿವ ಆರಾಧನೆಯಲ್ಲಿ ತೊಡಗಿದ್ದರು.
ಧರ್ಮಸ್ಥಳದ ಶ್ರೀ ಮಂಜುನಾಥ ಸ್ವಾಮಿ ದೇಗುಲ ಸೇರಿದಂತೆ ನಾಡಿನ ವಿವಿಧ ಶಿವ ದೇಗುಲಗಳಲ್ಲಿ ಭಕ್ತಾದಿಗಳು ಭಾರೀ ಸಂಖ್ಯೆಯಲ್ಲಿ ಆಗಮಿಸಿ ಶಿವನಾಮ ಸ್ಮರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ಇಡೀ ದಿನ ಉಪವಾಸ, ಜಾಗರಣೆಗಳನ್ನು ಮಾಡಿ, ನಾಲ್ಕು ಯಾಮಗಳಲ್ಲೂ ಶಿವ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಗುತ್ತದೆ. ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಗಳನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ. ಒಟ್ಟಿನಲ್ಲಿ ಇಂದು ಪ್ರತಿಯೊಬ್ಬರೂ ಶಿವನ ದ್ಯಾನದಲ್ಲಿ ತೊಡಗಿಕೊಂಡು ಹಬ್ಬ ಆಚರಿಸುವುದು ಎಲ್ಲೆಲ್ಲು ಕಂಡು ಬರುತ್ತಿದೆ.