ವರದಿ : ಈಶ್ವರ ಎಂ. ಐಲ್/ ಚಿತ್ರ,: ದಿನೇಶ್ ಕುಲಾಲ್
ಮಂಗಳೂರು : ಲಿಮ್ಕಾ ಬುಕ್ ದಾಖಲೆಯ, ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ, ಮುಂಬಯಿಯ ಕಲಾ ಜಗತ್ತಿನ ರೂವಾರಿ, ಖ್ಯಾತ ಕಲಾವಿದ ವಿಜಯ್ ಕುಮಾರ್ ಶೆಟ್ಟಿ ಯವರನ್ನು ಇಲ್ಲಿನ ರಂಗಾಸಕ್ತರು ಮಾ. 5 ರಂದು ಪುರಭವನದಲ್ಲಿ ಆಯೋಜಿಸಿದ ರಂಗೋತ್ಸವ ವಿಜಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ರಂಗೋತ್ಸವ ವಿಜಯೋತ್ಸವನ್ನು ಅಂತರಾಷ್ಟೀಯ ಬಂಟ್ಸ್ ವೆಲ್ಪೇರ್ ಟ್ರಸ್ಟ್ ನ ಅಧ್ಯಕ್ಷ ಎ. ಸದಾನಂದ ಶೆಟ್ಟಿಯವರು ಉದ್ಘಾಟಿಸಿ ಮಾತನಾಡುತ್ತಾ ಹುಟ್ಟು ಕಲಾವಿದರಾದ ವಿಜಯ್ ಕುಮಾರ್ ಶೆಟ್ಟಿ ಯವರ ಸಾಧನೆಯನ್ನು ಅಭಿನಂದಿಸಬೇಕಾಗಿದೆ ಎಂದು ಶುಭ ಹಾರೈಸಿದರು.
ವಿಜಯ್ ಕುಮಾರ್ ಶೆಟ್ಟಿ ಯವರು ಲಿಮ್ಕಾ ದಾಖಲೆಗಾಗಿ ತಾನು ಅಭಿನಯಿಸಿದ ತನ್ನದೇ ರಚನೆಯ ಆಯ್ದ ನಾಟಕಗಳ 30 ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ಕಲಾಭಿಮಾನಿಗಳ ಪ್ರಸಂಶೆಗೆ ಪಾತ್ರರಾದರು. ಈ ಮಧ್ಯೆ ಮುಂಬಯಿಯ ನೃತ್ಯ ಸಂಯೋಜಕಿ ಅಮಿತಾ ಜತಿನ್ ಅವರ ನಿರ್ದೇಶನದಲ್ಲಿ ಕಲಾ ಜಗತ್ತಿನ ಬಾಲ ಕಲಾಗಿದರಿಂದ ನೃತ್ಯ ಸಾದರಪಡಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬಂಟರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿಯವರು ಮಾತನಾಡುತ್ತಾ ವಿಜಯ್ ಕುಮಾರ್ ಶೆಟ್ಟಿ ಯವರ ನಾಟಕ ರಂಗದಲ್ಲಿನ ಸಾಧನೆಯ ಬಗ್ಗೆ ಅಬಿನಂದಿಸಿದರು. ರಂಗಾಶಕ್ತರ ಆಶ್ರಯದಲ್ಲಿ ವಿಜಯ್ ಕುಮಾರ್ ಶೆಟ್ಟಿ ಯವರನ್ನು ಸನ್ಮಾನಿಸಲಾಯಿತು.
ಜಾಗತಿಕ ಬಂಟರ ಸಂಘದ ಒಕ್ಕೂಟದ ಉಪಾಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಮಾತನಾಡುತ್ತಾ ತನ್ನ ಎಳೆಯ ಪ್ರಾಯದಲ್ಲೇ ಬಣ್ಣದ ಬದುಕಿಗೆ ಮಾರುಹೋದ ವಿಜಯ ಕುಮಾರ್ ಶೆಟ್ಟಿಯವರು ರಂಗದ ಮೇಲಿನ ಅಭಿಮಾನದಿಂದ ಇಂದು ದಾಖಲೆಯನ್ನು ನಿರ್ಮಿಸಿದ್ದಾರೆ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ವಿಜಯ್ ಕುಮಾರ್ ಶೆಟ್ಟಿ ಯವರ ಸಾಧನೆ ಬಗ್ಗೆ ಮಾತನಾಡುತ್ತಾ ಮುಂಬಯಿ ಬಂಟರ ಭವನದಲ್ಲಿ ಕಿಕ್ಕಿರಿದ ಅಭಿಮಾನಿಗಲ ಉಪಸ್ಥಿತಿಯಲ್ಲಿ ಲಿಮ್ಕಾ ಬುಕ್ ಆಪ್ ರೆಕಾರ್ಡಿಗಾಗಿ ಕಾರ್ಯಕ್ರಮ ನಡೆದಿದ್ದು ಇವರ ಕಲಾಬದುಕಿಗೆ ಪದ್ಮಭೂಷಣ ದೊರೆಯಲಿ ಎಂದು ಶುಭ ಕೋರಿದರು.
ಸನ್ಮಾನವನ್ನು ಸ್ವೀಕರಿಸಿದ ವಿಜಯ್ ಕುಮಾರ್ ಶೆಟ್ಟಿ ಯವರು “ರಂಗಭೂಮಿಯ ದೇವತೆ ನನಗೆ ಶಕ್ತಿ ನೀಡಿದ್ದು ಇಂತಹ ಸಾಧನೆ ಮಾಡುವಂತಾಗಿದೆ. ನನ್ನನ್ನು ಪ್ರೋತ್ಸಾಹಿಸಿದವರು ಇಂದು ಈ ವೇದಿಕೆಯಲ್ಲಿದ್ದಾರೆ. ಜೀವನ ಪಾಠವನ್ನು ಕಲಿಸುವ ನಾಟಕರಂಗ ಕಲಾವಿದನ ಪ್ರತಿಭೆಯನ್ನು ವಿಕಸನಗೊಳಿಸುತ್ತದೆ.” ಎಂದರು.
ಮುಂಬಯಿಯ ಉದ್ಯಮಿಗಳಾದ ಬಾಬಾಸ್ ಸಮೂಹದ ಮಹೇಶ್ ಶೆಟ್ಟಿ, ಹೋಟೇಲು ಉದ್ಯಮಿ ಶಾಂತಾರಾಮ ಶೆಟ್ಟಿ ಮತ್ತು ಬಿಲ್ಡ್ ಕೊಯಿನ್ ಸಂಸ್ಥೆಯ ಮಾಲಕ, ಚಾರ್ಕೋಪ್ ಕನ್ನಡ ಬಳಗದ ಅಧ್ಯಕ್ಷ ಮಂಜುನಾಥ ಬನ್ನೂರು ಅವರನ್ನು ವೇದಿಕೆಯ ಎಲ್ಲಾ ಗಣ್ಯರು ಸನ್ಮಾನಿಸಿದರು.
ವೇದಿಕೆಯಲ್ಲಿ ಮೀರಾ ಡಹಾಣು ಬಂಟ್ಸ್ ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಹಾನಿ ಶೆಟ್ಟಿ, ರಾಜೀವ್ ಭಂಡಾರಿ ಡೊಂಬಿವಲಿ, ಡೊಂಬಿವಲಿ ತುಳು ಕೂಟದ ಅಧ್ಯಕ್ಷ ಹೇಮಂತ್ ಶೆಟ್ಟಿ, ಬಂಟರ ಸಂಘದ ಜೊತೆ ಕೋಶಾಧಿಕಾರಿ ಮಹೇಶ್ ಶೆಟ್ಟಿ, ಬಂಟರವಾಣಿಯ ಕಾರ್ಯಾಧ್ಯಕ್ಷ ಶಾಂತಾರಾಮ ಶೆಟ್ಟಿ, ಡಾ. ಸಂಜೀವ ದಂಡಕೇರಿ, ಸುರೇಂದ್ರ ಕುಮಾರ್ ಹೆಗ್ಡೆ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ರಂಗಾಸಕ್ತರು ತಂಡದ ರಾಮಚಂದ್ರ ಬೈಕಂಪಾಡಿ, ವಿ. ಜಿ. ಪಾಲ್, ಎ. ಶಿವಾನಂದ ಕರ್ಕೇರ, ಕಾಂತಿ ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳಾ, ಲಕ್ಷೀನಾರಾಯಣ ರೈ ಹರೇಕಳ, ಸತೀಶ್ ಸುರತ್ಕಲ್ ಮೊದಲಾದವರ ಉಪಸ್ಥಿತಿಯಲ್ಲಿ ಜರಗಿದ ಈ ಕಾರ್ಯಕ್ರಮವನ್ನು ತೋನ್ಸೆ ಪುಷ್ಕಳ್ ಕುಮಾರ್, ದಯಾಸಾಗರ್ ಚೌಟ ಮತ್ತು ವಿ. ಜಿ. ಪಾಲ್ ನಿರ್ವಹಿಸಿದರು. ಭಾಸ್ಕರ ರೈ, ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದ್ದು ಶಮೀನಾ ಆಳ್ವ ಸನ್ಮಾನ ಪತ್ರ ವಾಚಿಸಿದರು.