ಬೆಂಗಳೂರು: ಸಿಎಂ ಸಿದ್ದರಾಮಯ್ಯನವರ ಬಳಿ ಇರುವುದು ಕಳ್ಳಸಾಗಣೆಯ ವಾಚ್ ಎಂಬುದು ಸಾಬೀತಾಗಿದೆ. ಹಾಗಾಗಿ ತಮ್ಮ ತಪ್ಪನ್ನು ಒಪ್ಪಿಕೊಂಡು ಹ್ಯೂಬ್ಲಾಟ್ ವಾಚ್ ಅನ್ನು ಸದನಕ್ಕೆ ಒಪ್ಪಿಸಿದ್ದಾರೆ. ದುಬಾರಿ ವಾಚ್ ಗೆ ಸೂಕ್ತ ದಾಖಲೆಗಳಿಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಎಸ್ ವೈ “ಸಿಎಂ ದುಬಾರಿ ವಾಚ್ ಪ್ರಕರಣ ಮುಖ್ಯವಾಗಿದ್ದರಿಂದ ವಿಧಾನಸಭೆಯ ಕಲಾಪಗಳಲ್ಲಿ ಆ ವಿಷಯವನ್ನು ಪ್ರಸ್ತಾಪಿಸಬೇಕಾಯಿತು. ಇಲ್ಲವಾದಲ್ಲಿ ಜನ ನಮ್ಮನ್ನು ಪ್ರಶ್ನಿಸುತ್ತಿದ್ದರು. ಅಲ್ಲದೇ ವಾಚ್ ಗೆ ಸೂಕ್ತ ದಾಖಲೆಗಳಿಲ್ಲ, ಈ ಕಾರಣಕ್ಕೆ ಶೇ.50ರಷ್ಟು ಶಾಸಕರು, ಸಚಿವರೇ ಸಿದ್ದರಾಮಯ್ಯನವರ ಜೊತೆಗಿಲ್ಲ. ಕಾಂಗ್ರೆಸ್ ಹೈಕಮಾಂಡ್ ಕೂಡಾ ಸಿದ್ದರಾಮಯ್ಯ ಅವರ ವಿರುದ್ಧ ತಿರುಗಿ ಬಿದ್ದಿದೆ” ಎಂದರು.
ಸಿಎಂ ನವರ ವಾಚ್ ಪ್ರಕರಣದ ಬಗ್ಗೆ ಕಾನೂನು ಹೋರಾಟ ಮುಂದುವರಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದ ಬಿ.ಎಸ್ ವೈ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.