ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಆಟಗಾರ ರಾಬಿನ್ ಉತ್ತಪ್ಪ ಮತ್ತು ಶೀತಲ್ ಗೌತಮ್ ಅವರ ಮದುವೆಯ ಆರತಕ್ಷತೆ ಗುರುವಾರ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿ ನೆರವೇರಿತು.
ರಾಬಿನ್ ಉತ್ತಪ್ಪ ಕರ್ನಾಟಕ ರಣಜಿ ತಂಡದ ಆರಂಭಿಕ ಬ್ಯಾಟ್ಸ್ಮನ್ ಆಗಿದ್ದಾರೆ. ಶೀತಲ್ ಗೌತಮ್ ಅವರು ಟೆನಿಸ್ ಆಟಗಾರ್ತಿಯಾಗಿದ್ದಾರೆ. ಆರತಕ್ಷತೆ ಸಮಾರಂಭದಲ್ಲಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಬಾಲಿವುಡ್ ನಟಿ ಜೂಹಿ ಚಾವ್ಲಾ ಹಾಜರಿದ್ದರು.
ಮಾರ್ಚ್ 13ರಂದು ಕೊಡವ ಸಂಪ್ರದಾಯದ ಪ್ರಕಾರ ವಿವಾಹ ನಡೆಯಲಿದೆ.
‘ನನ್ನ ಸಹೋದರ ರಾಬಿನ್ ಉತ್ತಪ್ಪ ನಿನ್ನ ಮತ್ತು ಶೀತಲ್ ದಾಂಪತ್ಯ ಜೀವನವು ಸಂತಸದಿಂದ ತುಂಬಿರಲಿ. ಸದಾ ನಗುತ್ತ ಬಾಳಿರಿ’ ಎಂದು ಇರ್ಫಾನ್ ಪಠಾಣ್ ಅವರು ಟ್ವಿಟರ್ ಮೂಲಕ ಶುಭ ಹಾರೈಸಿದ್ದಾರೆ.
‘ರಾಬಿನ್ ಉತ್ತಪ್ಪ ಮತ್ತು ಶೀತಲ್. ಈಗ ಪತಿ ಮತ್ತು ಪತ್ನಿ. ನಿಮಗೆ ಶುಭಾಶಯಗಳು’ ಎಂದು ನಟಿ ಜೂಹಿ ಚಾವ್ಲಾ ಕೂಡ ಟ್ವೀಟ್ ಮಾಡಿದ್ದಾರೆ.
ಧವಳ್ ಕುಲಕರ್ಣಿ–ಶ್ರದ್ಧಾ ವಿವಾಹ
ಮುಂಬೈ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮಧ್ಯಮವೇಗಿ ಧವಳ್ ಕುಲಕರ್ಣಿ ಮತ್ತು ಶ್ರದ್ಧಾ ಖರ್ಪುಡೆ ಅವರ ವಿವಾಹವು ಮಹಾರಾಷ್ಟ್ರದ ಸಾಂಪ್ರದಾಯಿಕ ಶೈಲಿಯಲ್ಲಿ ಗುರುವಾರ ನೆರವೇರಿತು.
ಫ್ಯಾಷನ್ ಸಂಯೋಜಕಿ ಆಗಿರುವ ಶ್ರದ್ಧಾ ಮತ್ತು ಧವಳ್ ಅವರ ಪರಿಚಯವು ನಾಲ್ಕು ವರ್ಷಗಳ ಹಿಂದೆ ಆಗಿತ್ತು. ಸ್ನೇಹ ಕ್ರಮೇಣ ಪ್ರೀತಿಯಾಗಿ ಮೊಳಕೆಯೊಡೆದಿತ್ತು. ಬಳಿಕ ಇಬ್ಬರೂ ಮದುವೆಯಾಗಲು ತೀರ್ಮಾನಿಸಿದ್ದರು.
ಮುಂಬೈ ತಂಡದಲ್ಲಿ ಅವರ ಸಹ ಆಟಗಾರರಾಗಿರುವ ರೋಹಿತ್ ಶರ್ಮಾ (ಬಾಂಗ್ಲಾದಲ್ಲಿ ಏಷ್ಯಾ ಕಪ್ ಟೂರ್ನಿಯಲ್ಲಿ ಆಡುತ್ತಿದ್ದಾರೆ) ಟ್ವೀಟ್ ಮೂಲಕ ಶುಭ ಹಾರೈಸಿದ್ದಾರೆ.