ಬಳ್ಳಾರಿ: ಜಮೀನಿನ ಭೂಸುಧಾರಣೆ ಕಾಯ್ದೆ ಉಲ್ಲಂಘನೆ ಸರಿಮಾಡಲು ಚಿತ್ರದುರ್ಗ ಎಸಿ ತಿಪ್ಪೇಸ್ವಾಮಿ 10 ಲಕ್ಷ ಲಂಚ ಕೇಳಿದ್ದಾರೆ ಹಾಗೂ ಲಂಚಕ್ಕಾಗಿ ಚೀಟಿಯನ್ನೂ ಬರೆದುಕೊಟ್ಟಿದ್ದಾರೆ ಎಂದು ಆರ್ಟಿಐ ಕಾರ್ಯಕರ್ತ ರಾಜಶೇಖರ್ ಆರೋಪಿಸಿ, ಲೋಕಾಯುಕ್ತ ಕಛೇರಿಗೆ ದೂರು ನೀಡಿದ್ದಾರೆ.
ಅಲ್ಲದೇ ಲೋಕಾ ದಾಳಿಗೂ 2 ದಿನಗಳ ಹಿಂದೆ ಎಸಿ ತಿಪ್ಪೇಸ್ವಾಮಿ ನಾಪತ್ತೆಯಾಗಿದ್ದು, ಲೋಕಾಯುಕ್ತ ಸಿಬ್ಬಂದಿಯಿಂದ ತಿಪ್ಪೇಸ್ವಾಮಿಗೆ ಮಾಹಿತಿ ಸೋರಿಕೆಯಾಗಿದ್ದರಿಂದಲೇ ತಿಪ್ಪೇಸ್ವಾಮಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಸದ್ಯ ಈ ಬಗ್ಗೆ ಆರ್ಟಿಐ ಕಾರ್ಯಕರ್ತ ರಾಜಶೇಖರ್ ಲೋಕಾಯುಕ್ತ ಎಡಿಜಿಪಿಗೆ ಲೋಕಾಯುಕ್ತ ಸಿಬ್ಬಂದಿ ವಿರುದ್ಧವೂ ದೂರು ನೀಡಿದ್ದಾರೆ.
ಇಷ್ಟೇ ಅಲ್ಲದೇ ಎಸಿ ಯವರು ತನಗೆ ಕೊಡುವ ಲಂಚದಲ್ಲಿ ಸಚಿವ ಆಂಜನೇಯ ಅವರಿಗೂ ಪಾಲಿದೆ ಎಂದು ತಿಳಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಇನ್ನು ಲಂಚ ಪ್ರಕರಣದಲ್ಲಿ ಆಂಜನೇಯ ಹೆಸರು ಥಳಕು ಹಾಕಿಕೊಳ್ಳುತ್ತಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದರೆ ಸಚಿವ ಆಂಜನೇಯ ಅವರು ಇದರಲ್ಲಿ ನಮ್ಮ ಪಾತ್ರವಿಲ್ಲ. ಇದರಲ್ಲಿ ನನ್ನ ಹೆಸರು ಸೇರಿಸಿರುವುದು ನನಗೆ ಬಹಳ ನೋವಾಗಿದೆ. ಪ್ರಕರಣದ ಸೂಕ್ತ ತನಿಖೆ ನಡೆಸಿ ಎಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಡಿಸಿಗೆ ಆದೇಶಿಸಿರುವುದಾಗಿ ಹೇಳಿದ್ದಾರೆ.