ಬೆಂಗಳೂರು, ಜ.5- ನಗರದ ಕೆ.ಆರ್.ಮಾರ್ಕೆಟ್ ಸ್ವಚ್ಛತೆ ಕಾಪಾಡುವಲ್ಲಿ ವಿಫಲರಾಗಿರುವ ಬಿಬಿಎಂಪಿ ಅಧಿಕಾರಿಗಳನ್ನು ಮೇಯರ್ ಮಂಜುನಾಥ ರೆಡ್ಡಿ ತರಾಟೆಗೆ ತೆಗೆದುಕೊಂಡ ಘಟನೆ ಇಂದು ನಡೆಯಿತು.
ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಗಬ್ಬು ನಾರುತ್ತಿದ್ದ ಮಾರುಕಟ್ಟೆಯನ್ನು ಸಿಡಿಮಿಡಿಗೊಂಡ ಮೇಯರ್ ಅವರು ಬಿಬಿಎಂಪಿ ಆರೋಗ್ಯ ವಿಭಾಗದ ಜಂಟಿ ಆಯುಕ್ತ ಯತೀಶ್ ಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಕೂಡಲೇ ಮಾರುಕಟ್ಟೆಯಲ್ಲಿರುವ ಬಯೋ ಮೆಟ್ರಿಕ್ ಕಸ ಸಂಸ್ಕರಣಾ ಘಟಕವನ್ನು ದುರಸ್ತಿಗೊಳಿಸಿ ಘಟಕವನ್ನು ಪುನರಾರಂಭಿಸಿ ಸಮರ್ಪಕ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಿದರು.
ಮಾರುಕಟ್ಟೆ ಸ್ವಚ್ಛತೆಗೆ ನಿಯೋಜಿಸಿದ್ದ 55 ಪೌರ ಕಾರ್ಮಿಕರು ಸಮರ್ಪಕವಾಗಿ ಸೇವೆ ಸಲ್ಲಿಸದ ಹಿನ್ನೆಲೆಯಲ್ಲಿ ಅವರನ್ನು ಸ್ಥಳದಲ್ಲೇ ವರ್ಗಾವಣೆಗೊಳಿಸಿ ಹೊಸಬರನ್ನು ನೇಮಕ ಮಾಡುವಂತೆ ಸೂಚಿಸಿದರು.
ನಂತರ ಮಾರುಕಟ್ಟೆ ಸಮೀಪದ ಫುಟ್ಪಾತ್ಗಳ ಮೇಲೆ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಸ್ಟೇರ್ಕೇಸ್ಗಳನ್ನು ತೆರವುಗೊಳಿಸಿದರು. ಇದೇ ಸಂದರ್ಭದಲ್ಲಿ ಮಾರುಕಟ್ಟೆ ವ್ಯಾಪಾರಿಗಳಿಗೆ ಸ್ವಚ್ಛತೆ ಬಗ್ಗೆ ಮೇಯರ್ ಮಂಜುನಾಥರೆಡ್ಡಿ ಅರಿವು ಮೂಡಿಸಿದರು. ಬಿಬಿಎಂಪಿ ಜಾಹಿರಾತು ವಿಭಾಗದ ಸಹಾಯಕ ಆಯುಕ್ತ ಮಥಾಯಿ ಮತ್ತಿತರ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.