ಬೆಂಗಳೂರು, ನ.29: ತುಳುನಾಡ ಸಂಸ್ಕೃತಿಯ ಭಾಗವಾಗಿರುವ ಕಂಬಳ ಆಚರಣೆ ಮೇಲಿನ ನಿಷೇಧವನ್ನು ಹಿಂಪಡೆಯುವ ಸಂಬಂಧ ರಾಜ್ಯ ಸರಕಾರ ಮರುಪರಿಶೀಲನೆ ನಡೆಸುವುದು ಅಗತ್ಯಎಂದು ಬಾರ್ಕೂರು ಮಠದ ವಿಶ್ವಸಂತೋಷ ಭಾರತಿ ಸ್ವಾಮಿಜಿ ಆಗ್ರಹಿಸಿದ್ದಾರೆ.
ರವಿವಾರ ನಗರದಲ್ಲಿನ ಡಾ.ರಾಜ್ಕುಮಾರ್ ಕಲಾಕ್ಷೇತ್ರದಲ್ಲಿ ತುಳುವರೆ ಚಾವಡಿ ವತಿಯಿಂದ ಆಯೋಜಿಸಲಾಗಿದ್ದ ‘ತುಳು ನಾಡ ಸಿರಿ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವ ಚನ ನೀಡಿದರು.
ಕಂಬಳ ಆಚರಣೆ ರದ್ದು ಮಾಡಿರುವುದರಿಂದ ತುಳುನಾಡಿನ ಸಂಸ್ಕೃತಿಯೇ ನಾಶವಾದಂತೆ ಭಾಸವಾಗುತ್ತಿದೆ. ಆದುದರಿಂದ, ರಾಜ್ಯ ಸರಕಾರ ಕಂಬಳವನ್ನು ಪುನರ್ ಆರಂಭಿಸುವ ನಿಟ್ಟಿನಲ್ಲಿ ಮರುಪರಿಶೀಲನೆ ನಡೆಸಲಿ ಎಂದು ಅವರು ಹೇಳಿದರು.
ಕಂಬಳದಲ್ಲಿ ಪ್ರಾಣಿಗಳಿಗೆ ಹಿಂಸೆ ನೀಡಲಾಗುತ್ತದೆ ಎಂದು ಆರೋಪಿಸುವವರಿಗೆ ಗೋ ಮಾತೆಯನ್ನು ವಧಿಸುತ್ತಿರುವುದು ಕಾಣುತ್ತಿಲ್ಲ. ಕಂಬಳ ಕರಾವಳಿಯ ಜಾನಪದ ಕಲೆ. ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಕಲೆಯನ್ನು ನಿಷೇಧಿಸಿರುವುದು ಸರಿಯಲ್ಲ ಎಂದು ಬಾರ್ಕೂರು ಶ್ರೀ ಅಭಿಪ್ರಾಯಪಟ್ಟರು.
ದೇಶದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿದೆ ಎಂದು ಕೆಲವು ಬುದ್ಧಿವಂತ ಸಾಹಿತಿಗಳು ತಮಗೆ ಲಭ್ಯವಾದ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿದ್ದಾರೆ. ಅಸಹಿಷ್ಣುತೆ ಇತ್ತೀಚೆಗೆ ಉದ್ಭವಿಸಿದ್ದಲ್ಲ. ಹಿಂದಿನಿಂದಲೂ ಜಾರಿಯಲ್ಲಿದೆ. ಆದರೆ, ಈ ಬುದ್ಧ್ದಿವಂತ ಸಾಹಿತಿಗಳಿಗೆ ಈಗ ಅದರ ಅರಿವಾಗಿರಬಹುದು ಎಂದು ಅವರು ಟೀಕಿಸಿದರು.
ಕರಾವಳಿಯ ಮತ್ತೊಂದು ಆಚರಣೆ ಭೂತಾರಾಧನೆ. ಆದರೆ, ರಾಜ್ಯ ಸರಕಾರ ಮೂಢನಂಬಿಕೆ ಪ್ರತಿಬಂಧಕ ಕಾನೂನಿನ ಮೂಲಕ ಭೂತಾರಾಧನೆ ಆಚರಣೆಯನ್ನು ಹತ್ತಿಕ್ಕಲು ಪ್ರಯತ್ನಿಸುವುದು ಸಮಂಜಸವಲ್ಲ. ಭೂತಾರಾಧನೆ ಕೇವಲ ನಂಬಿಕೆಗೆ ಮಾತ್ರ ಸೀಮಿತವಾಗಿಲ್ಲ. ಕರಾವಳಿ ಭಾಗದ ಜನರ ಭಾವನೆ ಹಾಗೂ ಸಂಸ್ಕೃತಿಯ ಪ್ರತೀಕ ಎಂದು ಅವರು ಹೇಳಿದರು.
ಸಂಸ್ಕೃತ ಭಾಷೆಯಿಂದ ಕನ್ನಡ ಹಾಗೂ ತಮಿಳು ಭಾಷೆಗಳು ಉಗಮವಾದಂತೆ, ತುಳು ಭಾಷೆಯೂ ಕನ್ನಡದಿಂದ ಉಗಮ ವಾಗಿದೆ. ಇದಕ್ಕೆ ಪ್ರತ್ಯೇಕ ಲಿಪಿಯಿದ್ದು, ಮಲಯಾಳಂ ಭಾಷೆ ಯನ್ನು ಹೋಲುತ್ತದೆ. ಪುರಾತನ ಭಾಷೆಗಳಲ್ಲಿ ತುಳು ಕೂಡ ಒಂದು. ಆದುದರಿಂದ, ಸರಕಾರ ಈ ಭಾಷೆಯ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಸಂಶೋಧಕಿ ಡಾ.ಇಂದಿರಾ ಹೆಗಡೆ, ಪತ್ರಕರ್ತ ಜಯಪ್ರಕಾಶ್ ಉಪ್ಪಳ, ಅಖಿಲ ಭಾರತ ತುಳು ಒಕ್ಕೂಟದ ಅಧ್ಯಕ್ಷ ಧರ್ಮ ಪಾಲ ದೇವಾಡಿಗ ಅವರಿಗೆ ತುಳುನಾಡ ಸಿರಿ ಪ್ರಶಸ್ತಿ ಪ್ರದಾನ ಮಾ ಡಲಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿಕಲಚೇತನ ವಿದ್ಯಾರ್ಥಿನಿ ರಮಿತಾ, ಅಂತಾರಾಷ್ಟ್ರೀಯ ಈಜುಪಟು ಕಪಿಲ್ ದೇವದಾಸ ಶೆಟ್ಟಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಸಮಾರಂಭದಲ್ಲಿ ಮಾಜಿ ಉಪಮೇಯರ್ ಎಸ್.ಹರೀಶ್, ಎಂಆರ್ಐ ಸಮೂಹ ಸಂಸ್ಥೆಗಳ ಅಧ್ಯಕ್ಷ ಕೊರಂಗ್ರಪಾಡಿ ಪ್ರಕಾಶ್ ಶೆಟ್ಟಿ, ಪಾಲಿಕೆ ಸದಸ್ಯ ಕೆ.ವಿ.ರಾಜೇಂದ್ರ ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.