ಬೆಂಗಳೂರು, ನ.29: ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿನ ಸಾಮಾಜಿಕ ವೌಲ್ಯಗಳು ಕುಸಿತಗೊಂಡಿದ್ದು, ಕೇವಲ ಶ್ರೀಮಂತಿಕೆಗೆ ಮಾತ್ರ ಮನ್ನಣೆ ಸಿಗುತ್ತಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ.
ರವಿವಾರ ‘ವೈಶ್ಯ ಸಂಪದ’ ಮಾಸಪತ್ರಿಕೆ ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವ ರಣದಲ್ಲಿ ಆಯೋಜಿಸಿದ್ದ ಪತ್ರಿಕೆಯ 2ನೆ ವರ್ಷದ ವಾರ್ಷಿಕೋತ್ಸವ ಹಾಗೂ ಜ್ಞಾನ ಸಂಪದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ಮೀತಿ ಮೀರಿದೆ. ಎಲ್ಲಿಯಾದರೂ ಪ್ರಾಮಾಣಿ ಕ ಅಧಿಕಾರಿಗಳು ಹಾಗೂ ವ್ಯಕ್ತಿಗಳು ಕಂಡು ಬಂ ದರೆ, ಅವರನ್ನು ಅಣಕಿಸುವ, ಭ್ರಷ್ಟಗೊಳಿಸುವ ಕಾರ್ಯಗಳು ನಡೆಯುತ್ತಿವೆ. ಇದು ಸರಿಯಾದ ಲಕ್ಷಣವಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಹೆಚ್ಚು ಸಂಬಳ ಪಡೆಯುವ ಸರಕಾರಿ ಅಧಿಕಾರಿಗಳು ಮಾನವಿಯತೆಯನ್ನು ಕಳೆದು ಕೊಂಡಿದ್ದಾರೆ. ಅಧಿಕಾರಿಗಳಿಗೆ ಜನಪರವಾದ ಯೋಜನೆಗಳನ್ನು ರೂಪಿಸಿ, ಸರ್ವತೋಮುಖ ಅಭಿವೃದ್ಧಿಗೊಳಿಸುವ ಎಲ್ಲ ಅವಕಾಶಗಳಿವೆ. ಆದರೆ, ಈ ಬಗ್ಗೆ ಅವರೆಂದೂ ಚಿಂತಿಸುವಂತೆ ಕಂಡು ಬರುತ್ತಿಲ್ಲವೆಂದು ಹೆಗ್ಡೆ ನುಡಿದರು. ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ನಮ್ಮ ಸಮಾಜದಲ್ಲಿ ನಿತ್ಯ ಹಲವು ಧನಾತ್ಮಕವಾದ ಹಾಗೂ ಸಮಾಜಪರ ಕಾರ್ಯಕ್ರಮಗಳು ನಡೆಯು ತ್ತವೆ. ಆದರೆ, ಮಾಧ್ಯಮಗಳು ಆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಅಪರಾಧ ಸುದ್ದಿಗಳಿಗೆ ಹೆಚ್ಚಿ ನ ಆದ್ಯತೆ ನೀಡುತ್ತಿದ್ದು, ಇದರಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದರು.
ನಾ.ಸೋಮೇಶ್ವರ, ಗುರುಮೂರ್ತಿ ಪೆಂಡ ಕೂರ್, ಕೆ.ರಾಜ ಕುಮಾರ್, ರಾಮಣ್ಣ ಕೋಡಿಹೊಸಹಳ್ಳಿ, ಮಂಜುಳಾ ರಾಜ್, ರಾಜೇಶ್ವರಿ ಹರೀಶ್ರಿಗೆ ‘ಜ್ಞಾನ ಸಂಪದ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪತ್ರಿಕೆಯ ಸಂಪಾದಕ ಆರ್.ಪಿ.ರವಿಶಂಕರ್, ವಾಸವಿ ಟ್ರಸ್ಟ್ನ ಅಧ್ಯಕ್ಷ ಡಾ.ಗೋವಿಂದರಾಜುಲು ಉಪಸ್ಥಿತರಿದ್ದರು.