ಚೆನ್ನೈ, ನ.21: ಇಸ್ಲಾಮಿಕ್ ಸ್ಟೇಟ್ (ಐಎಸ್ಐಎಸ್) ಸಂಘಟನೆಗೆ ಸೇರ್ಪಡೆಗೊಳ್ಳಲು ತೆರಳಿದ್ದ ತಮಿಳುನಾಡಿನ ಯುವಕರಿಬ್ಬರನ್ನು ಪೊಲೀಸರು ಹಾಗೂ ಗುಪ್ತಚರ ಇಲಾಖೆ ಅಧಿಕಾರಿಗಳ ಕಣ್ಗಾವಲಿನಲ್ಲಿ ಮರಳಿ ಬೆಂಗಳೂರಿಗೆ ಕರೆತರಲಾಗಿದ್ದು, ರಹಸ್ಯ ಪ್ರದೇಶದಲ್ಲಿ ಅವರ ವಿಚಾರಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಇಬ್ಬರು ಯುವಕರಲ್ಲಿ ಒಬ್ಬನು ಚೆನ್ನೈಯ ರಾಯ್ಪೇಟಾ ನಿವಾಸಿ 23 ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದು, ಮತ್ತೊಬ್ಬನು ಕರೂರಿನ 22ರ ಯುವಕ. ಇವನು ಪ್ರೌಢಶಾಲಾ ಮಟ್ಟದಲ್ಲೇ ಶಾಲೆ ಬಿಟ್ಟವನು ಎಂದು ಹೇಳಲಾಗಿದೆ. ಆದರೆ ಈ ಯುವಕರು ಮತ್ತು ಭಯೋತ್ಪಾದಕರ ನಡುವಿನ ಸಂಪರ್ಕ ಸಂಬಂಧಗಳ ಬಗ್ಗೆ ಅಧಿಕಾರಿಗಳು ಹೆಚ್ಚಿನ ಮಾಹಿತಿ ನೀಡಿಲ್ಲ.
ಸಿರಿಯಾದಲ್ಲಿ ಐಎಸ್ಐಎಸ್ ಸೇರಿಕೊಳ್ಳುವ ಬಗ್ಗೆ ಮಾಹಿತಿ ಸಂಗ್ರಹಿಸಲು ಈ ಯುವಕರು ಅಂತರ್ಜಾಲದಲ್ಲಿ ಹಲವು ದಿನಗಳ ಕಾಲ ಪರಿಶೀಲನೆ ನಡೆಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊನೆಗೆ ಇವರಿಗೆ ವ್ಯಕ್ತಿಯೊಬ್ಬ ಐಎಸ್ ದಾರಿ ತೋರಿಸಿದ್ದು, ಇಬ್ಬರೂ ಆಗಸ್್ವನಲ್ಲಿ ಬೆಂಗಳೂರಿಗೆ ಬಂದು ಇಲ್ಲಿಂದ ವಿಮಾನದ ಮೂಲಕ ದುಬೈಗೆ ತೆರಳಿದ್ದಾರೆ. ಕೆಲಸ ಹುಡುಕಿಕೊಂಡು ತಾವು ದುಬೈಗೆ ಹೋಗುತ್ತಿರುವುದಾಗಿ ತಮ್ಮ ಮನೆಗಳಲ್ಲಿ ತಿಳಿಸಿದ್ದಾರೆ.ಆದರೆ ದುಬೈಯಲ್ಲಿ ಅನುಮಾನಾಸ್ಪದವಾಗಿ ಕಂಡ ಇವರನ್ನು 15 ದಿನಗಳ ಹಿಂದೆ ಅಲ್ಲಿನ ಪೊಲೀಸರು ವಶಕ್ಕೆ ಪಡೆದಿದ್ದರು. ವಾಪಸಾದ ಅವರು ಬೆಂಗಳೂರಿನಲ್ಲಿ ಬಂದಿಳಿಯುತ್ತಿದ್ದಂತೆಯೇ ಪೊಲೀಸರು, ಗುಪ್ತಚರ ಇಲಾಖೆಯ ಅಧಿಕಾರಿಗಳು ಅವರಿಬ್ಬರನ್ನೂ ರಹಸ್ಯ ಸ್ಥಳಕ್ಕೆ ಕರೆದೊಯ್ದು ತನಿಖೆ ನಡೆಸಿದ್ದಾರೆ. ಜಗತ್ತನ್ನೇ ಆಳಲು ಹೊರಟಿರುವ ಐಎಸ್ನಿಂದ ಸ್ಫೂರ್ತಿ ಪಡೆದು ಅದಕ್ಕೆ ಸೇರಲು ತೆರಳುತ್ತಿದ್ದೆವು ಎಂದು ಯುವಕನೊಬ್ಬ ಹೇಳಿರುವುದಾಗಿ ತಿಳಿದುಬಂದಿದೆ.