ಬೆಂಗಳೂರು: ಆನ್ಲೈನ್ ಮಾರಾಟದಲ್ಲಿ ಕ್ರಾಂತಿಯನ್ನೆ ಸೃಷ್ಟಿಸಿರುವ ಫ್ಲಿಪ್ ಕಾರ್ಟ್ ಕಂಪನಿಗೇ ವಂಚಿಸುತ್ತಿದ್ದ ಚಾಲಾಕಿ ಡೀಲರ್ ಒಬ್ಬರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ವಿ.ವಿ.ಪುರ ದೊಡ್ಡಮಾವಳ್ಳಿ ನಿವಾಸಿ ರಮೇಶ್ಕುಮಾರ್(33) ಬಂಧಿತ ಆರೋಪಿ. ಕಾರುಗಳ ಎಲೆಕ್ಟ್ರಾನಿಕ್ಸ್ ಉಪಕರಣಗಳ ಆನ್ ಲೈನ್ ಮಾರಾಟಕ್ಕೆ ರಮೇಶ್ ಫ್ಲಿಪ್ ಕಾರ್ಟ್ ಕಂಪನಿಗೆ ಡೀಲರ್ ಆಗಿದ್ದ. ಆದರೆ, ನಕಲಿ ವಸ್ತುಗಳನ್ನು ನೀಡಿ, ಅಸಲಿ ವಸ್ತುಗಳ ಬೆಲೆಯನ್ನೇ ಪಡೆಯುತ್ತಿದ್ದ ಆರೋಪದಡಿಯಲ್ಲಿ ರಮೇಶ್ ಬಂಧಿಯಾಗಿದ್ದಾನೆ.
ಆರೋಪಿ ರಮೇಶ್ ಜೆ.ಸಿ.ರಸ್ತೆ 1ನೇ ಅಡ್ಡರಸ್ತೆಯಲ್ಲಿ ನಂದಿ ಎಲೆಕ್ಟ್ರಾನಿಕ್ಸ್ ಅಂಗಡಿ ಅರಂಭಿಸಿದ್ದ. ಈ ವರ್ಷದ ಮಾರ್ಚ್ನಿಂದ ಫ್ಲಿಪ್ ಕಾರ್ಟ್ ಡೀಲರ್ಶಿಪ್ ಪಡೆದಿದ್ದ. ಕಾರುಗಳ ಎಲೆಕ್ಟ್ರಾನಿಕ್ ಉಪಕರಣಗಳಿಗೆ ದೇಶದ ಯಾವುದೇ ಮೂಲೆಯಿಂದ ಆರ್ಡರ್ ಮಾಡಿದರೂ, ಪೂರೈಕೆ ಮಾಡುತ್ತಿದ್ದದ್ದು ಈತನೇ. ವಸ್ತುಗಳನ್ನು ಪ್ಯಾಕ್ ಮಾಡಿ ಫ್ಲಿಪ್ ಕಾರ್ಟ್ ನ ಸ್ಥಳೀಯ ಶಾಖೆಗೆ ಕಳುಹಿಸುತ್ತಿದ್ದ. ಅಲ್ಲಿಂದ ಸಂಸ್ಥೆ ಡೆಲಿವರಿ ಸಂಸ್ಥೆ ಮೂಲಕ ಗ್ರಾಹಕರಿಗೆ ತಲುಪಿಸುತ್ತಿತ್ತು. ಆದರೆ, ರಮೇಶ್ ಪ್ಯಾಕ್ನಲ್ಲಿ ಇರಿಸುತ್ತಿ ದ್ದದ್ದು ಮಾತ್ರ ನಕಲಿ ವಸ್ತುಗಳನ್ನು.
ತಾನೇ ಬುಕ್ ಮಾಡಿ, ತಾನೇ ವಾಪಸ್ ಮಾಡುತ್ತಿದ್ದ : ತನ್ನ ಅವ್ಯವಹಾರಕ್ಕಾಗಿ ನಕಲಿ ಇ ಮೇಲ್ ಅಕೌಂಟ್ಗಳನ್ನು ಸೃಷ್ಟಿಸಿಕೊಂಡಿದ್ದ ರಮೇಶ್, ಅಸ್ತಿತ್ವದಲ್ಲಿ ಇರದ ವಿಳಾಸ, ಮೊಬೈಲ್ ನಂಬರ್ ನಮೂದಿಸಿ ಬುಕ್ ಮಾಡುತ್ತಿದ್ದ. ಈ ಆರ್ಡರ್ಗಳನ್ನು ಪೂರೈಸುವಂತೆ ಫ್ಲಿಪ್ ಕಾರ್ಟ್ ಸಹಜವಾಗಿಯೇ ರಮೇಶನಿಗೆ ತಿಳಿಸುತ್ತಿತ್ತು. ಪ್ಯಾಕ್ ಮಾಡುವಾಗ ಅದರಲ್ಲಿ ಅಸಲಿ ಬದಲಿಗೆ ನಕಲಿ ವಸ್ತುಗಳನ್ನಿಟ್ಟು, ಫ್ಲಿಪ್ ಕಾರ್ಟ್ ನ ಸ್ಥಳೀಯ ಶಾಖೆಗಳಿಗೆ ಕಳುಹಿಸುತ್ತಿದ್ದ. ಅಲ್ಲಿಂದ ಫ್ಲಿಪ್ ಕಾರ್ಟ್ ನ ಸ್ಟಿಕ್ಕರ್ ಅಂಟಿಸಿ ವಿಳಾಸಕ್ಕೆ ಡೆಲಿವರಿಗೆ ಹೋಗುತ್ತಿದ್ದವು. ಆರೋಪಿ, ಜೆಸಿ ರಸ್ತೆ ಸುತ್ತಮುತ್ತಲಿನ ತಪ್ಪು ವಿಳಾಸ ನೀಡುತ್ತಿದ್ದರಿಂದ ಸರಕು ಡೆಲಿವರಿಯಾಗದೆ, ವಾಪಸ್ ಫ್ಲಿಪ್ ಕಾರ್ಟ್ ಗೆ ಬರುತ್ತಿತ್ತು. ನಿಯಮದ ಪ್ರಕಾರ ಫ್ಲಿಪ್ ಕಾರ್ಟ್ ಸಂಸ್ಥೆ ಗ್ರಾಹಕರಿಗೆ ತಲುಪದ ಉತ್ಪನ್ನಗಳನ್ನು ಗರಿಷ್ಠ 21 ದಿನ ತನ್ನಲ್ಲಿಟ್ಟುಕೊಳ್ಳುತ್ತದೆ.
ರಮೇಶನ ಮಳಿಗೆಗೆ ಉತ್ಪನ್ನಗಳು ವಾಪಸಾದಾಗ ಏನೂ ಗೊತ್ತಿಲ್ಲದವನಂತೆ, ಪ್ಯಾಕ್ ತೆರೆಯುತ್ತಿದ್ದ ರಮೇಶ್, ಕಳಪೆ ಉತ್ಪನ್ನಗಳು ವಾಪಸ್ ಬಂದಿವೆ. ನಿಮ್ಮ ಸಿಬ್ಬಂದಿಯೇ ಕಳಪೆ ವಸ್ತುಗಳನ್ನು ಕೊಟ್ಟಿದ್ದಾರೆ ಎಂದು ಫ್ಲಿಪ್ ಕಾರ್ಟ್ ಸಂಸ್ಥೆ ವ್ಯವಸ್ಥಾಪಕರಿಗೆ ದೂರುತ್ತಿದ್ದ. ಸಂಸ್ಥೆ ಹೆಸರಿಗೆ ಚ್ಯುತಿ ಬರಬಾರದೆಂದು ಸಂಸ್ಥೆ, ರಮೇಶನಿಗೆ ಉತ್ಪನ್ನದ ಪೂರ್ಣ ಹಣ, ಕಮೀಷನ್ ಕೊಡುತ್ತಿತ್ತು. ಹೀಗೆ ರಮೇಶ್ ವಂಚನೆ ಮಾಡುತ್ತಿದ್ದ.
ಇತ್ತೀಚೆಗೆ ರಮೇಶ್, ನಕಲಿ ವಿಳಾಸ ನೀಡಿ ಆನ್ಲೈನ್ನಲ್ಲಿ ರು.21 ಸಾವಿರ ಮೌಲ್ಯದ ಕಾರಿನ ಸ್ಟೀರಿಯೋ ಬುಕ್ ಮಾಡಿದ್ದ, ಇದರ ಆರ್ಡರ್ ರಮೇಶ್ನಿಗೇ ಬಂದಿತ್ತು. ಪ್ಯಾಕ್ನಲ್ಲಿ ಸೀಟ್ ಕವರ್ ಇಟ್ಟು ಕಳುಹಿಸಿದ್ದ. ವಿಳಾಸ ತಲುಪದ ಬಾಕ್ಸ್ , ವೆಸ್ಟ್ ಆಫ್ ಕಾರ್ಡ್ ರಸ್ತೆ ಶಾಖೆಗೆ ವಾಪಸಾಗಿತ್ತು. ಆದರೆ, ಬಾಕ್ಸ್ ಹಗುರವಾಗಿರುವುದನ್ನು ವ್ಯವಸ್ಥಾಪಕ ಶಿವರಾಮಕೃಷ್ಣ ಗಮನಿಸಿದ್ದರು. ಪಾರ್ಸಲ್ ತೆಗೆದಾಗ ಅದರಲ್ಲಿ ಸೀಟ್ ಕವರ್ ಇತ್ತು. ಈ ಬಗ್ಗೆ ಅನುಮಾನಗೊಂಡ ಶಿವರಾಮಕೃಷ್ಣ, ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಡೀಲರ್ ರಮೇಶ್ನ ವಂಚನೆ ಬಯಲಾಗಿದೆ.